This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ: ಗೋವಿಂದ ಕಾರಜೋಳ

ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ: ಗೋವಿಂದ ಕಾರಜೋಳ

ನಿಮ್ಮ ಸುದ್ದಿ ಬೆಂಗಳೂರು

ಬರಗಾಲದ ಜಿಲ್ಲೆ ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ. ಆ ಕೆಲಸವನ್ನು ನಾವು ಮಾಡ್ತಾ ಇದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ 2006ರಲ್ಲಿ ಪ್ರಾರಂಭವಾಗಿದೆ. 2815 ಎಚ್‌ಪಿ ಸಾಮರ್ಥ್ಯದ ಒಟ್ಟು 8 ಪಂಪ್‌ಗಳನ್ನ ಹಾಕಿದ್ದೇವು. ಅದರಲ್ಲಿ 5 ಪಂಪ್‌ಗಳು 2015/16 ರಲ್ಲಿಯೇ ರಿಪೇರಿಗೆ ಬಂದಿದ್ದವು. 7.75 ಕೋಟಿ ರೂ. ಖರ್ಚು ಮಾಡಿ 7 ಪಂಪ್‌ಗಳನ್ನ ರಿಪೇರಿ ಮಾಡಿ 5 ವರ್ಷ ಅದೇ ಕಂಪನಿಗಳಿಗೆ ನಿರ್ವಹಣೆಗೆ ನೀಡಿದ್ದೇವೆ. ಈಗಾಗಲೇ 4 ಪಂಪ್‌ಗಳನ್ನು ಶುರು ಮಾಡಿದ್ದು, 2 ಪಂಪ್ ಈ ತಿಂಗಳಲ್ಲೇ ಮುಗಿಯುತ್ತದೆ. ಒಟ್ಟಾರೆ 7 ಪಂಪ್‌ಗಳನ್ನು ಶುರು ಮಾಡುತ್ತೇವೆ ಎಂದು ಹೇಳಿದರು.

ಇನ್ನು, 147 ಕಿಮೀವರೆಗೂ ನೀರು ಬಿಡ್ಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಅದಕ್ಕೆ ತಾಂತ್ರಿಕ ಸಮಸ್ಯೆಗಳಿವೆ. 97 ಕಿಮೀರವರೆಗೂ ನೀರು ಕೊಡ್ತಾ ಇದೀವಿ, 42 ಸಾವಿರ ಹೆಕ್ಟೇರ್‌ನಷ್ಟು ನೀರಾವರಿಯನ್ನು ಮಾಡಿಕೊಡುತ್ತೇವೆ. ಕುಡಿಯುವ ನೀರಿಗಾಗಿಯೇ ಕೊಡ್ತಾ ಇದೀವಿ. ಸ್ಕಾಡಾ ಗೇಟ್ ಅಳವಡಿಸಬೇಕು ಎಂದಿದ್ದಾರೆ. ಅದನ್ನ ಆಲೋಚನೆ ಮಾಡುತ್ತೇವೆ ಎಂದು ತಿಳಿಸಿದರು.

ರೇವಣ್ಣ ಸಿದ್ದೇಶ್ವರ ಏತನೀರಾವರಿ ಯೋಜನೆ ಸಣ್ಣ ಪ್ರಾಜೆಕ್ಟ್ ಅಲ್ಲ ಅದು 3000 ಕೋಟಿ ರೂ. ಮೌಲ್ಯದ ಯೋಜನೆ. ಈ ಹಿಂದೆ ಬೊಮ್ಮಾಯಿಯವರು ಐದು ವರ್ಷಗಳ ಹಿಂದೆ ನೀರಾವರಿ ಇಲಾಖೆಯ ಮಂತ್ರಿಯಾಗಿದ್ದಾಗಲೂ ಅದೇ ಬೇಡಿಕೆ ಇತ್ತು. ಆದರೆ, ಯಾರು ಮಾಡಿರಲಿಲ್ಲ. ಸಿಎಂ 3000 ಕೋಟಿ ರೂಪಾಯಿ ಯೋಜನೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಈಗಾಗಲೇ ಮೊದಲನೇ ಹಂತದ ಕಾಮಗಾರಿಗೆ 770 ಕೋಟಿ ರೂಪಾಯಿಗೆ ಅನುಮೋದನೆ ನೀಡಿ ಟೆಂಡರ್‌ ಪ್ರಕ್ರಿಯೆ ಶುರುವಾಗಿದೆ. ಎರಡನೇ ಹಂತದ ಕಾಮಗಾರಿಗೂ ಶೀಘ್ರದಲ್ಲಿ ಟೆಂಡರ್‌ ಕರೆಯುತ್ತೇವೆ ಎಂದು ಹೇಳಿದರು.

ರೇವಣ್ಣ ಸಿದ್ದೇಶ್ವರ ಏತನೀರಾವರಿ ಯೋಜನೆಯಿಂದ ಒಂದು ಹುಲ್ಲು ಕಡ್ಡಿ ಬೆಳೆಯದ ವಿಜಯಪುರ ಜಿಲ್ಲೆಯ 57 ಹಳ್ಳಿಗಳಿಗೆ ನೀರಾವರಿಯಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಹೋಗುತ್ತದೆ. 5 ವರ್ಷ ನಿಮ್ಮ ಹತ್ತಿರ ಸರ್ಕಾರ ಇದ್ದರು ನೀವು ಏನು ಮಾಡ್ಲಿಲ್ಲ, ಕಳಕಳಿ ಕಾಳಜಿಯಿಂದ ನಮ್ಮ ಸರ್ಕಾರ ಮಾಡುತ್ತದೆ ಎಂದು ತಿಳಿಸಿದರು.

 

*ಕಾರಂಜಾ ಕಾಲುವೆಯ ಮರುನವೀಕರಣ*

ಇನ್ನು, ಕಾರಂಜಾ ಏತನೀರಾವರಿ ಯೋಜನೆಯ ಕಾಲುವೆಯ ಆಧುನೀಕರಣ ಆಗದೇ ಇರುವುದರಿಂದ ರೈತರ ಹೊಲದಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗಿದೆ ಎಂದು ಶಾಸಕ ಬಂಡೇಪ್ಪ ಕಾಶೆಂಪೂರ್‌ ಅವರ ಪರವಾಗಿ ಶಾಸಕ ವೆಂಕಟರಾವ್‌ ನಾಡಗೌಡ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿ, 21 ಕಿಲೋ ಮೀಟರ್ ಮುಖ್ಯ ಕಾಲುವೆಗೆ 1993-94 ರಲ್ಲಿ ಜಭಾದ್ ಸ್ಟೋನ್‌ಗಳನ್ನು ಹಾಕಿದ್ದರು. ಹೀಗಾಗಿ ನೀರು ಸರಿಯಾಗಿ ಹೋಗ್ತಾ ಇರ್ಲಿಲ್ಲ. ಒಟ್ಟು 45 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, ಈಗಾಗಲೇ 32.5 ಕೋಟಿ ರೂ. ಖರ್ಚು ಮಾಡಲಾಗಿದೆ. ಕೆಲ ತಿಂಗಳಲ್ಲಿ ಬಾಕಿ ಉಳಿದಿರುವುದನ್ನು ಮರುನವೀಕರಣ ಮಾಡಿಸುತ್ತೇವೆ ಎಂದರು.

 

*ಜಿಲ್ಲಾಧಿಕಾರಿಗಳಿಂದ ವರದಿ ತರಿಸಿ ಪರಿಶೀಲನೆ*

ಇನ್ನು, ಕಾರಂಜಾ ಏತ ನೀರಾವರಿ ಯೋಜನೆಯಿಂದ ಮನೆಗಳಿಗೆ ನೀರು ನುಗ್ಗುತ್ತಿದೆ, ಅವುಗಳನ್ನು ಸ್ಥಳಾಂತರ ಮಾಡಬೇಕು ಎಂಬ ಶಾಸಕ ರಾಜಶೇಖರ್‌ ಪಾಟೀಲ್‌ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿ, 1993-94ರಲ್ಲಿ ಆಗಿರುವ ಪ್ರಾಜೆಕ್ಟ್ ಇದು. ಅವತ್ತು ಸರ್ವೆ ಮಾಡಿ ಎಫ್‌ಆರ್‌ನಲ್ಲಿ ಬಂದಿರುವುದಕ್ಕೆ ಪರಿಹಾರ ಹಾಗೂ ಸ್ಥಳಾಂತರ ಮಾಡುವ ಕೆಲಸ ಮಾಡಿದ್ದಾರೆ. ಈಗ ಹೆಚ್ಚುವರಿ ನೀರು ಬರ್ತಾ ಇದೆ ಅಂತ ಹೇಳಿದ್ದಾರೆ. ನೀರು ಹೆಚ್ಚು ಬರ್ತಾ ಇದ್ರೆ ಖಂಡಿತವಾಗಿಯೂ ಸರ್ಕಾರ ಅದನ್ನ ಪರಿಶೀಲನೆ ಮಾಡುತ್ತದೆ. ಮನೆಯೊಳಗೆ ನೀರು ನುಗ್ಗಿದ್ರೆ ಪರಿಹಾರವಾಗಿ 10 ಸಾವಿರ ನೀಡುವಂತೆ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಆ ಗ್ರಾಮ ಪೂರ್ಣ ಸ್ಥಳಾಂತರ ಮಾಡ್ಬೇಕಾದ್ರೆ ಅವತ್ತು ಸರ್ವೇ ಮಾಡಿದ್ದಾರೆ. ಸರ್ವೆ ಮಾಡಿ ನೀರು ಎಲ್ಲಿವರೆಗೂ ಹೋಗಿದೆ ಎನ್ನುವ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ. ಆ ರೀತಿಯಾಗಿ ಗ್ರಾಮಕ್ಕೆ ಗ್ರಾಮವೇ ಮುಳುಗಡೆಯಾಗಿ ಬಿಟ್ಟು ಹೋಗಿರುವ ಪ್ರಸಂಗ ದೇಶದ ಇತಿಹಾಸದಲ್ಲೇ ಇಲ್ಲ. ಮಳೆ ಹೆಚ್ಚಾಗಿರುವುದರಿಂದ ನೀರು ಹೆಚ್ಚಾಗಿ ಬಂದಿರಬಹುದು. ಜಿಲ್ಲಾಧಿಕಾರಿಗಳಿಂದ ವರದಿ ತರಿಸಿ ಪರಿಶೀಲಿಸುತ್ತೇವೆ ಎಂದರು.

 

*ಅನುದಾನದ ಲಭ್ಯತೆ ಆಧಾರದ ಮೇಲೆ ಬ್ರಿಡ್ಜ್‌ ಕಂ ಬ್ಯಾರೇಜ್‌*

ಚಳ್ಳಕೆರೆಯ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ವಿಚಾರವಾಗಿ ಶಾಸಕ ರಘುಮೂರ್ತಿ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿ, ಬಜೆಟ್‌ನಲ್ಲಿ 25 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಿರಲಿಲ್ಲ. ಬಜೆಟ್ ಭಾಷಣದಲ್ಲಿ ಘೋಷಣೆ ಆಗಿರುವ ಯೋಜನೆ ಇದು. ನಾವು ತಾರತಮ್ಯ ಮಾಡುವ ಪ್ರಶ್ನೆ ಇಲ್ಲ. ಬ್ರಿಡ್ಜ್ ಕಂ ಬ್ಯಾರೇಜ್ ತಗೊಳ್ಬೇಕು ಎಂಬುದು ನಮಗೂ ಇದೆ. ನಮ್ಮ ಇಲಾಖೆಗೆ ಪ್ರತಿ ವರ್ಷ ಬಜೆಟ್‌ನಲ್ಲಿ 18 ರಿಂದ 19 ಸಾವಿರ ಕೋಟಿ ಅನುದಾನ ಸಿಗ್ತಾ ಇದೆ. ನಮ್ಮ ಇಲಾಖೆಗೆ ಕಾರ್ಯಭಾರ ಇರುವಂತದ್ದು, 1 ಲಕ್ಷದ 2 ಸಾವಿರ ಕೋಟಿಗಿಂತ ಹೆಚ್ಚಿದೆ. ಪ್ರತಿ ವರ್ಷ ಘೋಷಣೆ ಮಾಡ್ತಾ ಹೋಗಿದಾರೆ, ಪ್ರತಿ ವರ್ಷವೂ ಹೆಚ್ಚಾಗುತ್ತಿದೆ‌. ಹಾಗಾಗಿ ಅನುದಾನದ ಲಭ್ಯತೆ ಆಧಾರದ ಮೇಲೆ ತೆಗೆದುಕೊಳ್ಳಬೇಕು ಎಂಬ ಉದ್ದೇಶ ಇದೆ. ಯಾವುದೇ ತಾರತಮ್ಯ ಮಾಡ್ಬೇಕು ಎಂಬ ಉದ್ದೇಶ ಇಲ್ಲ ಎಂದರು.

 

*ಗುಂಡಾಲ್‌ ಜಲಾಶಯದ ದುರಸ್ತಿಗೆ ಕ್ರಮ*

ಚಾಮರಾಜಪೇಟೆಯ ಗುಂಡಾಲ್‌ ಜಲಾಶಯದ ನಿರ್ವಹಣೆಗೆ ಹೆಚ್ಚಿನ ಅನುದಾನ ಒದಗಿಸುವಂತೆ ಶಾಸಕ ಆರ್ ನರೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ ಅವರು, ಗುಂಡಾಲ್‌ ಜಲಾಶಯ 1980ರಿಂದ ಇಲ್ಲಿಯವರೆಗೂ ನಾಲ್ಕೇ ಸಲ ಭರ್ತಿಯಾಗಿದೆ. ಹೀಗಾಗಿ ಕಾಲುವೆಗಳು ದುರಸ್ತಿಯಾಗದೇ ಅವ್ಯವಸ್ಥೆ ಆಗಿರುವುದು ನಿಜ. ಆದರೂ ಕೂಡ ಪ್ರತಿ ವರ್ಷ ಅನುದಾನ ನೀಡಿದ್ದೀವಿ. ಅಷ್ಟು ಸಾಕಾಗುತ್ತಿಲ್ಲ ಎಂದು ಹೇಳಿದ್ದಾರೆ. ಖಂಡಿತವಾಗಿಯೂ 15 ಸಾವಿರ ಎಕರೆಗೆ ನೀರಾವರಿ ಆಗುವಂತಹ ಜಲಾಶಯ ಅದು, ಅದರ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

";