This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ಪ್ರಾಚೀನ ಪರಂಪರೆಯ ತಿಮ್ಮಾಪೂರಿನ ಮಾರುತೇಶ್ವರ ಬಸವೇಶ್ವರ ಜಾತ್ರೆ

ಪ್ರಾಚೀನ ಪರಂಪರೆಯ ತಿಮ್ಮಾಪೂರಿನ ಮಾರುತೇಶ್ವರ ಬಸವೇಶ್ವರ ಜಾತ್ರೆ

ಹುನಗುಂದ-ನಾಡಿನಲ್ಲಿಯೇ ಪ್ರಾಚೀನ ಪರಂಪರೆ, ಸಂಪ್ರದಾಯದ ಪ್ರತೀಕ, ಉತ್ತರಿ ಮಳೆಯಲ್ಲಿ ಬರುವ ಏಕೈಕ ಜಾತ್ರೆಯೇ ಹುನಗುಂದ ತಾಲೂಕಿನ ತಿಮ್ಮಾಪೂರದ ಮಾರುತೇಶ್ವರ ಬಸವೇಶ್ವರರ ಜಾತ್ರೆ. ಇಂದಿಗೂ ಅನೇಕ ಪವಾಡಗಳ ಸದೃಶ್ಯ ಘಟನೆಗಳು ಈ ಗ್ರಾಮದಲ್ಲಿ ನಡೆಯುತ್ತಿರುವುದು ವಿಶೇಷ ಹನಮಂತ ದೇವರಿಗೆ ಓಕುಳಿ ಮತ್ತು ಅಗ್ನಿಕುಂಡ ಮಾಡುವುದ್ದನ್ನು ಕೇಳಿದ್ದೇವೆ ಆದರೆ ಇಲ್ಲಿ ಹತಾರ ಸೇವೆಯ ಮೂಲಕ ಮಾರುತೇಶ್ವರ ಜಾತ್ರೆ ನಡೆಯುವುದು ವಿಶಿಷ್ಠವಾಗಿದೆ.

ಹೌದು, ಬಾಗಲಕೋಟೆ ವಿಜಯಪುರ ಜಿಲ್ಲೆಯಲ್ಲಿಯೇ ಐವರು ಪ್ರಾಣ ದೇವರನ್ನು ಜಾಗೃತ ದೇವರೆಂದು ಕರೆಯಲಾಗಿದೆ, ಅದರಲ್ಲಿ ಯಲಗೂರ, ಹಲಗಲಿ, ತುಳಿಸಿಗೇರಿ, ಅಚನೂರ ಹಾಗೂ ಕೋರವಾರ ದೇವರನ್ನು ಜಾಗೃತ ದೇವರೆಂದು ಕರೆಯುವ ವಾಡಿಕೆ. ಅದರಂತೆ ಹುನಗುಂದ ತಾಲೂಕಿನ ತಿಮ್ಮಾಪೂರದ ಮಾರುತೇಶ್ವರ ದೇವರು ಕೂಡಾ ಜಾಗೃತ ದೇವರೆಂದು ಹೆಸರಾಗಿದೆ. ಪ್ರಚಾರ ಸಿಗದ್ದಕ್ಕೆ ಜನ ಸಾಮಾನ್ಯರಿಗೆ ಈ ಮಾರುತಿ ದೇವರ ಮಹತ್ವದ ಬಗ್ಗೆ ಹೆಚ್ಚಿಗೆ ತಿಳಿದಿಲ್ಲ ಎಂಬುದೆ ಖೇದದ ಸಂಗತಿ.

ಶ್ರೀಮಾರುತೇಶ್ವರ ಸ್ಥಾಪನೆಯ ಹಿನ್ನೆಲೆ-ಈ ಊರಿನ ಪೂಜಾರಿಗಳು ಹರಪನಹಳ್ಳಿಯ ದೇಸಾಯಿ ಮನೆತನಕ್ಕೆ ಸೇರಿದವರೆಂಬ ಪ್ರತೀತಿ. ಅವರು ಒಂದು ಕಾಲದಲ್ಲಿ ಹರಪನಹಳ್ಳಿಯನ್ನು ಬಿಟ್ಟು ಬರುವ ವೇಳೆಯಲ್ಲಿ ಹುನಗುಂದ ತಾಲೂಕಿನ ದಮ್ಮೂರದ ಗುಡ್ಡದಲ್ಲಿ ಬರುತ್ತಿರುವಾಗ ಮಾರುತೇಶ್ವರನು “ಭಕ್ತನೇ. ನೀನು ಎಲ್ಲಿಗೆ ಹೋಗುವೆ? ನನ್ನನ್ನು ಅಲ್ಲಿಗೆ ಕರದುಕೊಂಡು ಹೋಗು, ನಾನು ನಿನ್ನ ಜೊತೆ ಬರುತ್ತೇನೆ”. ಎಂದು ಒಂದು ಅಶರೀರವಾಣಿ ಕೇಳಿತಂತೆ ಆಗ ಆ ಭಕ್ತನು “ನಿನ್ನನ್ನು ಹೊಯುವುದು ಹೇಗೆ? ನೀನು ಬಾರವಾಗಿದ್ದಿಯಾ ಎಂದಾಗ ಮಾರುತೇಶ್ವರನು “ ನಾನು ರೋಟಿ ತೂಕದಲ್ಲಿ ಬರುತ್ತೇನೆ.” ಎನ್ನಲು, ಆ ವ್ಯಕ್ತಿ ನೆಲದಲ್ಲಿರುವ ಆ ಕಲ್ಲನ್ನು ಎತ್ತಿಕೊಳ್ಳಲು ಅದು ಬಹಳ ಹಗುರವಾಯಿತಂತೆ. ಅದನ್ನು ಎತ್ತಿಕೊಂಡು ಅಲ್ಲಿಂದ ಹುನಗುಂದ ತಾಲೂಕಿನ ತಿಮ್ಮಾಪೂರ ಕಡೆಗೆ ಹೊರಟನಂತೆ, ಊರ ಸಮೀಪಕ್ಕೆ ಬರು ಬರುತ್ತಾ ಮೂರ್ತಿ ಭಾರವಾಯಿತಂತೆ. ಆಗ ಕಲ್ಲಿನ ಮೂರ್ತಿಯನ್ನು ಕೆಳಗೆ ಇಟ್ಟು ಹೊರಟು ನಿಂತಾಗ, ಮತ್ತೆ ಮಾರುತೇಶ್ವರನ ಮೂರ್ತಿಯು ನನ್ನನ್ನು ಇಲ್ಲಿ ಬಿಟ್ಟು ಹೋಗಬೇಡಾ, ನನಗೆ ಡೊಳ್ಳು ಕಳಸದೊಂದಿಗೆ ಬಂದು ಕರೆದುಕೊಂಡು ಹೋಗು. ಸಂಗಟಿ ಎಡೆಯ ನೈವಿದ್ಯ ತೆಗೆದುಕೊಂಡು ಬರಲು ಊರಲ್ಲಿ ಹೇಳು ಹೇಳಿದನಂತೆ. ಆ ಪ್ರಕಾರ ಅವನು ಗ್ರಾಮಕ್ಕೆ ತೆರಳಿ ಗ್ರಾಮದ ಕೆಲವು ಮನೆತನದವರನ್ನು ಕರೆದುಕೊಂಡು ಸಂಗಟಿ ಎಡೆಯ ನೈವಿದ್ಯವನ್ನು ಮಾಡಿ ಅದ್ದೂರಿ ಮೆರವಣಿಗೆ ಮೂಲಕ ಗ್ರಾಮಕ್ಕೆ ತಂದು ಮೂರ್ತಿಯನ್ನು ಪ್ರತಿಷ್ಠಾಪಿಸಿದರಂತೆ. ಅಲ್ಲಿಂದ ಇಲ್ಲಿಯವರಿಗೂ ಮಾರುತೇಶ್ವರನಿಗೆ ಸಂಗಟಿ ನೈವಿದ್ಯವನ್ನು ಹಿಡಿಯುವ ವಾಡಿಕೆ ಇಂದಿಗೂ ನಡೆದುಕೊಂಡು ಬಂದಿದೆ. ಆಕರ್ಷಣಿಯ ಜೋಡಿ ಗುಡಿಗಳು-ಈ ಗ್ರಾಮದ ದಕ್ಷಿಣಾಭಿಮುಖವಾಗಿ ಮಾರುತೇಶ್ವರ ಮತ್ತು ಬಸವೇಶ್ವರ ದೇವಾಲಯ ಇರುವುದು ವಿಶೇಷ. ಈ ಎರಡು ದೇವರ ಜಾತ್ರೆ ಒಂದೇ ದಿನ ನಡೆಯುವುದು ಮತ್ತೊಂದು ವಿಶೇಷವಾಗಿದೆ. ಮಾರುತೇಶ್ವರ ದೇವಾಲಯವನ್ನು ಹುನಗುಂದದ ಜನಾದ್ರಿ ಮನೆತನದ ಹಿರಿಯರೊಬ್ಬರು ಕಟ್ಟಿಸಿದರು. ಗ್ರಾಮಸ್ಥರು ದೇವಾಲಯಕ್ಕೆ ಗೋಪುರ ಕಟ್ಟಿ ಆ ದೇವಾಲಯವನ್ನು ಮತ್ತೊಮ್ಮೆ ಜೀಣೋದ್ದಾರ ಮಾಡಲಾಯಿತು ಎಂದು ಹೇಳಲಾಗುತ್ತಿದೆ.

ವಿಶಿಷ್ಠ ಹತಾರ ಸೇವೆ-ಈ ದೇವಾಲಯದ ಎದುರಿಗೆ ಭರಮದೇವರ ಕಟ್ಟಿ ಇದ್ದು.ಜಾತ್ರೆಯ ದಿನವಾದ ಸೆ-೧೭ ರಂದು ೧೨ಕ್ಕೆ ಹಾಗೂ ಸಂಜೆ ೬ಕ್ಕೆ ಗುಡಿಯ ಪ್ರದಕ್ಷಿಣೆ ಹಾಕುತ್ತಾ ಪೂಜಾರಿ ಹತಾರ ಸೇವೆಗೈಯುವರು. ಹರಿತವಾದ ಖಡ್ಗದ ಪೆಟ್ಟು ತಿನ್ನುವ ಪೂಜಾರಿಯ ಮೈ ಮೇಲೆ ಸ್ವಲ್ಪವೂ ಗಾಯ ಕಾಣೋದಿಲ್ಲ. ತೊಟ್ಟು ರಕ್ತದ ಕಲೆಯು ಇರೋದಿಲ,್ಲ ಇದು ಹನಮಂತ ದೇವರ ಪವಾಡವೇ ಸರಿ. ಇನ್ನು ಹತಾರವನ್ನು ಹೊಟ್ಟೆಗೆ ಇಟ್ಟು ಕೊಂಡು ಬಾಗುವ ಮೂಲಕ ಖಡ್ಗವನ್ನು ಮಣಿಸಲು ಪ್ರಯತ್ನಸುವುದು ಒಂದು ರೋಚಕ ದೃಶ್ಯ. ಇದೊಂದು ಅದ್ಭುತ ಪವಾಡ ಸದೃಶ್ಯ ಅಷ್ಟೆಯಲ್ಲ ಅದು ನೋಡಗರಿಗೆ ಒಂದು ರೋಮಾಂಚನಕಾರಿಯಾಗಿದೆ.ಇದಾದ ನಂತರ ಮಳೆ ಬೆಳೆಯ ಬಗ್ಗೆ ಹೇಳಿಕೆ ಹೇಳುವ ಸಂಪ್ರದಾಯ.
ಸುತಗಾಯಿ ಸಂಪ್ರದಾಯ-ಜಾತ್ರೆಯ ದಿನ ಸಂಜೆ ಸಕಲ ವಾಧ್ಯ ವೈಭವದೊಂದಿಗೆ ದೇವಾಲಯ ಪ್ರದಕ್ಷಿಣೆ ಹಾಕುತ್ತಾ ಪ್ರತಿ ಸುತ್ತಿಗೆ ಪ್ರತಿ ಮನೆಯವರು ಹಾಗೂ ಜಾತ್ರೆಗೆ ಬಂದವರು ೫ ರಿಂದ ೧೦೧ ಸುತಗಾಯಿ(ಟೆಂಗಿನಕಾಯಿ) ಒಡೆಯುವ ಸಂಪ್ರದಾಯವಿದೆ.ಇನ್ನು ಸುತಗಾಯಿ ಒಡೆಯುವಾಗ ಗುಡಿಯ ಎದರು ನಾಲ್ಕು ಜನರು ಕಂಬಳಿ ಹಿಡಿದು ನಿಂತಿರುತ್ತಾರೆ ಅದರ ಒಳಗೆ ಜೋರಾಗಿ ತೆಂಗಿನಕಾಯಿಯನ್ನು ಒಗೆದು ಒಡೆಯುವ ಹರಸಾಹಸ ಮಾಡುತ್ತಿರುವ ದೃಶ್ಯ ನೋಡುಗರ ಮನ ತಣಿಸುತ್ತದೆ.

ಉತ್ತರಿ ಮಳೆಯಲ್ಲಿ ನಡೆಯುವ ವಿಶೇಷ ಜಾತ್ರೆ-ಹುಬ್ಬಿ ಮಳೆಯ ಕೊನೆಯ ಪಾದದಲ್ಲಿ ಬರುವ ಶನಿವಾರದಂದು ದೇವರಿಗೆ ನೀರು ಹನಿಸುವ ಮೂಲಕ ಪ್ರಾರಂಭವಾಗುವ ಈ ಜಾತ್ರೆಯು ಉತ್ತರಿ ಮಳೆಯು ಶುಭಾರಂಭವನ್ನು ಕಾಣಬಹುದು. ಈ ಮಳೆಯು ತಾಲೂಕಿನ ಯಾವ ಭಾಗದಲ್ಲೂ ಆಗದಿದ್ದರೂ ತಿಮ್ಮಾಪೂರ ಮತ್ತು ಅದರ ಸುತ್ತಮುತ್ತಲು ಜಾತ್ರೆ ಮುಗಿಯುವರಿಗೂ ಬಿಟ್ಟು ಬಿಡದಂತೆ ಮಳೆ ಸುರಿಸುವ ಮೂಲಕ ಹಿಂಗಾರು ಬಿತ್ತನೆಯ ಮುನ್ಸೂಚನೆಯನ್ನು ನೀಡುತ್ತದೆ. ಇದೆಲ್ಲ ಪವಾಡ ಪುರುಷ ಹನಮಂತ ಮತ್ತು ಬಸವೇಶ್ವರ ಕೃಪೆ ಎಂದು ಗ್ರಾಮಸ್ಥರು,ಸುತ್ತ ಮುತ್ತಲ ಊರಿನವರು ತಿಳಿದುಕೊಂಡಿದ್ದಾರೆ.

೧೮ ರಂದು ಜೋಡಿ ದೇವರ ರಥೋತ್ಸವ-ಸೆ-೧೬ ರಿಂದ ೧೮ರವರಗೆ ಮೂರು ದಿನಗಳ ಕಾಲ ಅನೇಕ ಧಾರ್ಮಿಕ ಕೈಂಕರ್ಯ ನಡೆಯುತ್ತೆವೆ ಸೆ-೧೮ರಂದು ಜೋಡಿ ದೇವರುಗಳ ರಥೋತ್ಸವವು ಜರುಗುವುದು.

-ನಾಡಿನ ಹಲವು ಜಾತ್ರೆ ಉತ್ಸವಗಳಲ್ಲಿ ಭವಿಷ್ಯವಾಣಿಯನ್ನು ನುಡಿಯುವ ಪದ್ದತಿ ಆಯಾ ಪ್ರಾದೇಶಿಕತೆ ಅನುಗುಣವಾಗಿ ನಡೆದುಕೊಂಡು ಬಂದಿದೆ ಅಂತೇ ತಿಮ್ಮಾಪೂರನ ಮಾರುತೇಶ್ವರನ ಜಾತ್ರೆಯಲ್ಲಿ ಕಾರಣೀಕ ವಾಣಿಯನ್ನು ಕೇಳಲು ಭಕ್ತರು ಕಾತುರದಿಂದ ಕಾಯುತ್ತಾರೆ. ನಾಡಿನಲ್ಲಿ ಮಳೆ, ಬೆಳೆ ಪ್ರಕೃತಿ ವಿಕೋಪ ಕುರಿತು ಭವಿಷ್ಯ ನುಡಿಯುತ್ತಾರೆ ಇಲ್ಲಿ ನುಡಿಯುವ ಕಾರಣೀಕ ನುಡಿಗಳು ನಿಜವಾಗಿವೆ -ಜಗದೀಶ ಹದ್ಲಿ ತಿಮ್ಮಾಪೂರ ಗ್ರಾಮಸ್ಥ.

ಲೇಖನ
ಜಗದೀಶ ಹದ್ಲಿ ತಿಮ್ಮಾಪೂರ
(ಮೊ) ೯೬೧೧೭೬೧೯೭೯

";