ಬಾಗಲಕೋಟೆ
ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ತಮ್ಮ ವಾರ್ಡ್ ಗಳಲ್ಲಿ 10 ಮತ ಹೆಚ್ಚಿಗೆ ಪಡೆಯದವರಿದ್ದು ಅಂತವರಿಂದ ತಮ್ಮನ್ನು ಪಕ್ಷದಿಂದ ಉಚ್ಛಾಟಿಸುವಂತೆ ಶಿಫಾರಸು ಮಾಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೈ.ಎಸ್.ಬಂಡಿವಡ್ಡರ್ ಹಾಗೂ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಬಿ.ಎಸ್.ನಿಡಗುಂದಿ ವ್ಯಂಗ್ಯವಾಡಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಇಬ್ಬರು ಮುಖಂಡರು, ಅಮೀನಗಡ ಕಾಂಗ್ರೆಸ್ ಪಕ್ಷದ ನಗರ ಘಟಕ ಐವರ ಕಪಿಮುಷ್ಟಿಯಲ್ಲಿ ಅದೋಘತಿಗೆ ಇಳಿದಿದೆ. ಪ್ರತಿಯೊಂದು ವಿಷಯದಲ್ಲಿ ಈ ಐವರು ಏಕಪಕ್ಷಿಯ ನಿರ್ಧಾರ ತೆಗೆದುಕೊಳ್ಳುತ್ತಿದ್ದು ಇದು ಪಟ್ಟಣ ಪಂಚಾಯತಿ ಅಧ್ಯಕ್ಷರ ಆಯ್ಕೆಯಲ್ಲಿಯೂ ಸಾಬೀತಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ನಡೆದ ವಿಷಯವನ್ನು ಬೇರೆಡೆ ತಿಳಿಸುವ ಆರೋಪ ತಮ್ಮ ಮೇಲಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ. ನಿಜವಾಗಿ ಇಂತಹ ಸಭೆಗೆ ಆ ಐವರು ಮುಖಂಡರು ತಮ್ಮನ್ನು ಸಭೆಗೆ ಕರೆದಿಲ್ಲ ಕಾಂಗ್ರೆಸ್ ಪಕ್ಷದಲ್ಲಿ ಮೂವರು ಪಂಚಾಯತಿ ಅಧ್ಯಕ್ಷರಾಗುವ ಅರ್ಹತೆ ಇದ್ದರೂ ವಿನಾಕಾರಣ ವಿಳಂಬ ಮಾಡುವ ಮೂಲಕ ಪಕ್ಷಕ್ಕೆ ಹಾನಿ ಉಂಟು ಮಾಡಿದ್ದಾರೆ ಎಂದು ಹರಿಹಾಯ್ದರು.
ನಗರ ಘಟಕದ ಅಧ್ಯಕ್ಷ ಪೀರಾ ಖಾದ್ರಿ, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಸ್ ಎಸ್ ಚಳ್ಳಗಿಡದ, ಮನೋಹರ ರಕ್ಕಸಗಿ, ಜಗದೀಶ ಬಿಸಲದಿನ್ನಿ, ಪ್ರಭಾಕರ್ ನಾಗರಾಳ ಈ ಐವರು ಪಕ್ಷದಲ್ಲಿ ಹಲವು ಹಿರಿಯರು ಹಾಗೂ ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಡೆದುಕೊಳ್ಳುತ್ತಿರುವ ಪರಿಣಾಮ ಇಂದು ನಗರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ. ಈ ಹಿಂದೆ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಇವರು ಪ್ರತಿನಿಧಿಸುತ್ತಿದ್ದ ವಾರ್ಡ್ ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಇದು ಹೀಗೆ ಮುಂದುವರೆದರೆ ಪಕ್ಷಕ್ಕೆ ದೊಡ್ಡ ಮಟ್ಟದ ಹಾಣಿಯಾಗುತ್ತಿದ್ದು ಪಕ್ಷದ ವರಿಷ್ಠರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.