ಬಾಗಲಕೋಟೆ
ವಿನಾಶದ ಅಂಚಿನಲ್ಲಿರುವ ಕುಂಬಾರಿಕೆ ವೃತ್ತಿಗೆ ಆಧುನಿಕತೆಯ ಸ್ಪರ್ಶ ನೀಡಿ ವೃತ್ತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಜಾರಿಗೊಳಿಸಿರುವ ಯೋಜನೆಯೊಂದು ಕುಂಬಾರಿಕೆ ವೃತ್ತಿಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವವರಿಗೆ ಹೊಸ ಹುರುಪು ನೀಡಿದೆ.
ಇಂದಿನ ಆಧುನಿಕ ಜಗತ್ತಿನಲ್ಲಿ ಮಣ್ಣಿನಿಂದ ತಯಾರಾಗುವ ಮಡಿಕೆ, ಕುಡಿಕೆಯಂತಹ ಸಾಮಗ್ರಿಗಳಿಗೆ ವಿಶೇಷ ಮಾನ್ಯತೆ ಇದೆ. ಆದರೆ ಈ ಹಿಂದೆ ವೃತ್ತಿಗೆ ಬಳಸುತ್ತಿದ್ದ ವೀಲ್ ತಿಗುರಿ ಮೂಲಕ ಮಣ್ಣಿನ ವಸ್ತುಗಳನ್ನು ತಯಾರಿಗಾಗಿ ಹರಸಾಹಸ ಪಡಬೇಕಿತ್ತು. ಜತೆಗೆ ಈ ಕೆಲಸದಲ್ಲಿ ತೊಡಗಿರುವವರಿಗೆ ಅನಾರೋಗ್ಯವೂ ಉಂಟಾಗಿ ಸಲಕರಣೆ, ಮಾರುಕಟ್ಟೆ ಕೊರತೆಯ ಹೊಡೆತದಿಂದ ಕ್ರಮೇಣ ಈ ವೃತ್ತಿಯನ್ನೇ ತೊರೆಯುವ ನಿರ್ಧಾರಕ್ಕೆ ಹಲವು ಕುಟುಂಬಗಳು ಮುಂದಾಗಿದ್ದವು.
ಆದರೆ ಇದೀಗ ಸೃಜನಶೀಲತೆ, ಸಮರ್ಪಣೆ ಮತ್ತು ಬದ್ಧತೆಯ ಸಂಯೋಜನೆಯಿAದ ಈ ಉದ್ಯೋಗದಲ್ಲಿ ಪುನರುಜ್ಜೀವನ ಕಂಡುಕೊಳ್ಳಬಹುದು ಎಂಬುದನ್ನು ಕಂಡುಕೊಂಡ ಕುಂಬಾರಿಕೆ ಕುಟುಂಬಗಳು ಕೇಂದ್ರ ಸರಕಾರದ ವಿನೂತನ ಯೋಜನೆಯ ಪ್ರಯೋಜನ ಪಡೆದು ನಾನಾ ಕಲಾಕೃತಿ ತಯಾರಿಕೆಯತ್ತ ಮುಖ ಮಾಡಿವೆ.
೨೦೨೩-೨೪ನೇ ಸಾಲಿನ ಗ್ರಾಮೋದ್ಯೋಗ ವಿಕಾಸ ಯೋಜನೆಯ ಕುಂಬಾರ ಸಶಕ್ತೀಕರಣ ಕಾರ್ಯಕ್ರಮದಲ್ಲಿ ಕುಂಬಾರಿಕೆ ಕೌಶಲ್ಯ ಅಭಿವೃದ್ಧಿ ತರಬೇತಿ ಜಿಲ್ಲೆಯಲ್ಲಿ ಮೊದಲ ಬಾರಿ ಹುನಗುಂದ ತಾಲೂಕಿನ ಅಮೀನಗಡ ಹಾಗೂ ಇಳಕಲ್ ತಾಲೂಕಿನ ಮುರಡಿ ಗ್ರಾಮದಲ್ಲಿ ನಡೆಯುತ್ತಿದೆ.
ಸೂಕ್ಷö್ಮ, ಸಣ್ಣ ಮತ್ತು ಮದ್ಯಮ ಉದ್ಯಮಗಳ ಸಚಿವಾಲಯದಿಂದ ಕೇಂದ್ರ ಕುಂಬಾರಿಕೆ ಸಂಸ್ಥೆ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ನುರಿತ ತರಬೇತುದಾರರು ಆಯ್ಕೆ ಮಾಡಿದ ಪ್ರತಿ ಊರಿನಿಂದ ೨೦ ಜನರಿಗೆ ವೃತ್ತಿಯಲ್ಲಿ ನೈಪುಣ್ಯತೆ ಹೊಂದಲು ೧೦ ದಿನದ ತರಬೇತಿ ನೀಡಲಾಗುತ್ತಿದೆ. ತರಬೇತಿ ನಂತರ ಪ್ರತಿಯೊಬ್ಬರಿಗೂ ಉಚಿತವಾಗಿ ಮಷಿನ್ ವಿತರಿಸಲಾಗುತ್ತದೆ.
ವಿನೂತನ ಯಂತ್ರದಲ್ಲಿ ಹಣತೆ, ಕುಡಿಕೆ, ನೀರಿನ ಬಾಟಲ್, ಕಟಿಂಗ್ ಪಾಟ್, ಪ್ಲಾವರ್ ಪಾಟ್, ವಾಟರ್ಪಾಟ್, ಜಗ್, ಗ್ಲಾಸ್, ಕಪ್, ಚಹಾಕಿತ್ತಲಿ, ಗಂಟೆ, ಸಣ್ಣಮಿನಾರ್, ದೂಪದ ಪಾತ್ರೆ ಹೀಗೆ ಹತ್ತು ಹಲವು ವಸ್ತುಗಳನ್ನು ತಯಾರಿಸಬಹುದಾಗಿದೆ. ಇಂತಹ ವಸ್ತುಗಳಿಗೆ ಇದೀಗ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇದ್ದು ಉತ್ತಮ ಬೆಲೆ, ಗೌರವ ಮತ್ತು ಪ್ರಾಮುಖ್ಯತೆಯೂ ದೊರೆಯುತ್ತಿದೆ.
ಸಾಂಪ್ರದಾಯಿಕ ಉದ್ಯೋಗವಾದ ಕುಂಬಾರಿಕೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರದ ವಿನೂತನ ಯೋಜನೆಯ ಸಫಲತೆ ಪಡೆದು ಆರ್ಥಿಕವಾಗಿ ಸಬಲೀಕರಣ ಹೊಂದಬಹುದು. ಇಂದಿನ ಆಧುನಿಕತೆಗೆ ತಕ್ಕಂತೆ ನವೀನ ರೀತಿಯ ಮಡಿಕೆ, ಕುಡಿಕೆ ತಯಾರಿಸುವುದು ಅಗತ್ಯವಾಗಿದೆ.
-ಮಲ್ಲಪ್ಪ ಎಚ್. ಕುಂಬಾರ, ತರಬೇತಿ ನಿರತ ಸದಸ್ಯ.