This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Agriculture NewsEducation NewsLocal NewsNational NewsState News

ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಚಿಂಚಲಕಟ್ಟಿ ತಾಂಡಾದ ಯುವಕ

ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಚಿಂಚಲಕಟ್ಟಿ ತಾಂಡಾದ ಯುವಕ
ಬಾಗಲಕೋಟೆ:
  ಬಾದಾಮಿ ತಾಲ್ಲೂಕಿನ ಚಿಂಚಲಕಟ್ಟಿ ತಾಂಡಾದ ಬಡ ರೈತ ಧನಸಿಂಗ್ ಪಮ್ಮಾರ ಅವರ ಮಗ ಕೃಷ್ಣಪ್ಪ ಪಮ್ಮಾರ ಸಿವಿಲ್ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ. ಈ ಯುವಕನ ಸಾಧನೆ ತಾಂಡಾದಲ್ಲಿ ಹಬ್ಬದ ವಾತಾವರಣಕ್ಕೆ ಕಾರಣವಾಗಿದೆ.
ಕೃಷ್ಣಪ್ಪ ಪಮ್ಮಾರ ಅವರು 2023 ರಲ್ಲಿ ಆಹ್ವಾನಿಸಲಾಗಿದ್ದ ರಾಜ್ಯದ ಸಿವಿಲ್ ನ್ಯಾಯಾಲಯಗಳಲ್ಲಿ ಖಾಲಿಯಿರುವ ಹುದ್ದೆಗಳ ಪರೀಕ್ಷೆ ಬರೆದು ತಾಲೂಕಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎಂಬಂತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿವಿಲ್ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.
2023-24 ಸಾಲಿನ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ 9ನೇಯವರಾಗಿ ಜನರಲ್ ಮೆರಿಟ್‌ನಲ್ಲಿ ಆಯ್ಕೆಯಾಗಿ ಗುರಿ ಮುಟ್ಟಿರುವ ಯುವಕ ಕೃಷ್ಣಪ್ಪ ಪಮ್ಮಾರ ಅವರ ಸಾಧನೆಗೆ ಇಡೀ ತಾಂಡಾದ ಜನರು ಸಂಭ್ರಮಪಡುತ್ತಿದ್ದಾರೆ.
ಬಾದಾಮಿ ತಾಲ್ಲೂಕಿನ ಈ ಪುಟ್ಟ ತಾಂಡಾ ಒಂದು ಗ್ರಾಮ ಕೂಡಾ ಅಲ್ಲ. ಈ ತಾಂಡಾದಲ್ಲಿ ನಾಗರಿಕ ಸೌಲಭ್ಯಗಳೂ ಅಷ್ಟಕ್ಕಷ್ಟೇ. ಆದರೆ ಸತತ ಮತ್ತು ಛಲ ಬಿಡದೇ ಅಧ್ಯಯನ ಮಾಡುವ ಮೂಲಕ ಸ್ವಂತ ಪರಿಶ್ರಮದಿಂದ ಸಿವಿಲ್ ನ್ಯಾಯಾಧೀಶರಂತಹ ಉನ್ನತ ಹುದ್ದೆಗೇರಿರುವುದು ಇಡೀ ನಮ್ಮ ತಾಂಡಾ ಹೆಮ್ಮೆ ಪಡುವಂತಾಗಿದೆ ಎಂದು ತಾಂಡಾದ ಜನರು ಅಭಿಪ್ರಾಯಪಟ್ಟಿದ್ದಾರೆ. ಅಚಲ ಪ್ರಯತ್ನ ಮತ್ತು ಸಾಧನೆಯ ಛಲವಿದ್ದರೆ ಸಾಧನೆಗೆ ಯಾವುದೂ ಕೂಡಾ ಅಡ್ಡಿಯಾಗದು ಎಂಬುದಕ್ಕೆ ಕೃಷ್ಣಪ್ಪ ಪಮ್ಮಾರ ಯುವಕನ ಸಾಧನೆಯೇ ಸಾಕ್ಷಿ ಎಂದು ಅವರು ಹೇಳಿದ್ದಾರೆ.
ಬಡರೈತನ ಮಗನಾಗಿ ಹೊಲಮನೆಯಲ್ಲಿ ಕೆಲಸ ಮಾಡಿ ನಿರಂತರವಾಗಿ ಓದಿದ ಯುವಕನಿಗೀಗ ತೀರ್ಪು ಬರೆಯುವ ಹುದ್ದೆಗೇರಿದ ಗರಿಮೆಗೆ ಪಾತ್ರನಾಗುವ ಮೂಲಕ ಚಾಲುಕ್ಯ ನಾಡಿನ ಕೀರ್ತಿ ಎಲ್ಲ ಕಡೆಗಳಲ್ಲಿ ಪಸರಿಸುವಂತಾಗಿದೆ. ತಾಂಡಾವೊಂದರ ಯುವಕ ನ್ಯಾಯ-ಅನ್ಯಾಯ ತೀರ್ಮಾನಿಸುವ ಹುದ್ದೆಗೇರಿರುವುದು ನಮಗೆಲ್ಲಾ ಆದರ್ಶಪಾಯವಾಗಿದೆ ಎಂದು ತಾಂಡಾದ ಯುವಕರು ಹೇಳುತ್ತಾರೆ.
ಸಾಧನೆಯ ಹಾದಿ: ಏಳನೇ ತರಗತಿಯಲ್ಲಿದ್ದಾಗ ಲಾಯರ್ ಆಗುವ ಬಯಕೆ ಹೊಂದಿದ್ದ ಬಾಲಕನಿಗೆ ಬಾದಾಮಿಯ ವೀರ ಪುಲಕೇಶಿ ಕಾಲೇಜಿನಲ್ಲಿ ಪಿಯುಸಿ ಓದುವಾಗ ಎದುರಿಗಿದ್ದ ಬಾದಾಮಿ ನ್ಯಾಯಾಲಯಕ್ಕೆ ಬರುವ ನ್ಯಾಯಾಧೀಶರಿಗೆ ನೀಡುವ ಗೌರವ ಮುಂದೊಂದು ದಿನ ನಾನು ನ್ಯಾಯಾಧೀಶನಾಗಬೇಕೆಂಬ ದೃಢಸಂಕಲ್ಪ ಮಾಡಿದ್ದೆ ಎಂದು ತನ್ನ ಸಾಧನೆಯ ಹಿಂದಿನ ಗುರಿ ಕುರಿತು ಕೃಷ್ಣಪ್ಪ ಪಮ್ಮಾರ ಪ್ರತಿಕ್ರಿಯಿಸಿದ್ದಾರೆ.
ಬಾಗಲಕೋಟೆಯ ಎಸ್.ಸಿ ನಂದಿಮಠ ಕಾಲೇಜಿನಲ್ಲಿ 5 ವರ್ಷದ ಎಲ್‌ಎಲ್‌ಬಿ ತೇರ್ಗಡೆಯಾಗಿ ಧಾರವಾಡ ಎಸ್.ಕೆ.ಲಾ ಕಾಲೇಜಿನಿಂದ ಎಲ್‌ಎಲ್‌ಎಂ ಪದವಿ ಪಡೆದಿರುವ ಕೃಷ್ಣಪ್ಪ ಪಮ್ಮಾರ ಅವರು ಸಿವಿಲ್ ನ್ಯಾಯಾಧೀಶರ ಹುದ್ದೆಯ ಆಯ್ಕೆ ಪರೀಕ್ಷೆಗಳ ಸಿದ್ಧತೆ ಮಾಡುತ್ತಿದ್ದು 2020 ರಿಂದ 3 ಬಾರಿ ಪ್ರಿಲಿಮ್ಸ್ ಮತ್ತು ಮೇನ್ಸ್ ಎರಡು ಪರೀಕ್ಷೆಯಲ್ಲಿ ಪಾಸಾಗಿ ಸಂದರ್ಶನದಲ್ಲಿ ವಿಫಲನಾಗಿದ್ದರು. ಆದರೆ ಎದೆಗುಂದದೆ ನಿರಂತರ ಅಧ್ಯಯನ ಮಾಡಿ 2023-24 ಸಾಲಿನ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ನಾವು ಅನುಭವಿಸಿದ ಕಷ್ಟ-ಸಂಕಷ್ಟದ ಕಾವು ಮಕ್ಕಳಿಗೆ ತಾಕದಿರಲೆಂದು ಕೂಲಿನಾಲಿ ಮಾಡಿಯಾದರೂ 4 ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದ್ದು, ಹಿರಿಮಗನ ಈ ಸಾಧನೆ ಹೆಮ್ಮೆ ಉಂಟು ಮಾಡಿದೆ. ಸಮಾಜದಲ್ಲಿ ಅನ್ಯಾಯಕ್ಕೊಳಗಾಗಿ, ಜೀವನದಲ್ಲಿ ನೊಂದು ಕೋರ್ಟ್ ಮುಂದೆ ಬರುವ ಜನರಿಗೆ ನ್ಯಾಯ ಒದಗಿಸುವ ಕಾರ್ಯ ಮಗನಿಂದಾಗಲಿ ಎಂಬ ಹಾರೈಕೆ ನಮ್ಮದು ಎನ್ನುತ್ತಾರೆ ಕೃಷ್ಣಪ್ಪ ಪಮ್ಮಾರ ಅವರ ತಂದೆ ಧನಸಿಂಗ್ ಪಮ್ಮಾರ ಮತ್ತು ತಾಯಿ ಭೀಮವ್ವ ಪಮ್ಮಾರ ಅವರು.
";