This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಅಖಿಲ ಭಾರತ ಅಗ್ರಿ ಸ್ಟಾರ್ಟ-ಅಪ್ ಸಮಾವೇಶ

ತೋಟಗಾರಿಕೆ ವಿವಿಯಲ್ಲಿ
೧೮ ರಿಂದ ಅಖಿಲ ಭಾರತ ಅಗ್ರಿ ಸ್ಟಾರ್ಟ-ಅಪ್ ಸಮಾವೇಶ : ಡಾ.ಇಂದಿರೇಶ

ನಿಮ್ಮ ಸುದ್ದಿ ಬಾಗಲಕೋಟೆ

ತೋಟಗಾರಿಕೆ ವಿವಿಯ ಉದ್ಯಾನಗಿರಿಯಲ್ಲಿ ಅಕ್ಟೋಬರ ೧೮ ರಿಂದ ೨೦ ವರೆಗೆ ಮೂರು ದಿನಗಳ ಕಾಲ ಅಖಿಲ ಭಾರತ ಅಗ್ರಿ ಸ್ಟಾರ್ಟ-ಅಪ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ ತಿಳಿಸಿದರು.

ತೋವಿವಿಯ ಪ್ರೇಕ್ಷಾ ಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ ೧೮ ರಂದು ಬೆಳಿಗ್ಗೆ ೧೦.೩೦ಕ್ಕೆ ಜರಗುವ ಕಾರ್ಯಕ್ರಮವನ್ನು ಭಾರತೀಯ ಅನುಸಂಧಾನ ಕೃಷಿ ಪರಿಷತ್ತಿನ ಉಪ ಮಹಾನಿರ್ದೇಶಕ ಡಾ.ಆರ್.ಸಿ.ಅಗರವಾಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ತೋಟಗಾರಿಕೆ ಸಚಿವ ಎನ್.ಮುನಿರತ್ನ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಶಾಸಕ ವೀರಣ್ಣ ಚರಂತಿಮಠ ಭಾಗವಹಿಸಲಿದ್ದಾರೆಂದು ತಿಳಿಸಿದರು.

ಅಕ್ಟೋಬರ ೨೦ ರಂದು ಮಧ್ಯಾಹ್ನ ೩ ಗಂಟೆಗೆ ಜರಗುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಹೈದರಾಬಾದ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ನೀರಜಾ ಪ್ರಭಾಕರ, ಮಹಾನಿರ್ದೇಶಕ ಡಾ.ಪಿ.ಚಂದ್ರಶೇಖರ, ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಹನಮಂತ ನಿರಾಣಿ ಭಾಗವಹಿಸಲಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ತೋವಿವಿಯಲ್ಲಿ ಆಯೋಜಿಸಲಾಗುತ್ತಿದೆ ಎಂದರು.

ಭಾರತೀಯ ಕೃಷಿ ಅನುಸಂಧಾನ ಪರಿಷತ್, ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆ, ಸಾಂಸ್ಥಿಕ ಅಬಿವೃದ್ದಿ ಯೋಜನೆ ಅಡಿಯಲ್ಲಿ ಉದ್ಯಮಶೀಲ ಸಾಮರ್ಥ್ಯ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸಲು ನವೀನ ಶಿಕ್ಷಣ ವಿನ್ಯಾಸಗಳು ಎಂಬ ಯೋಜನೆಯು ವಿಶ್ವಬ್ಯಾಂಕ್‌ನಿಂದ ೬೫೭.೪೨ ಲಕ್ಷಗಳ ಅನುದಾನದೊಂದಿಗೆ ಬಾಗಲಕೋಟೆ ತೋಟಗಾರಿಕೆ ವಿವಿಗೆ ಮಂಜೂರಾಗಿರುವುದಾಗಿ ತಿಳಿಸಿದರು.

ಅಗ್ರಿ ಸ್ಟಾರ್ಟ-ಅಪ್‌ಗಳು ಕೃಷಿಯೇತರ ವೃತ್ತಿಪರರಿಂದ ಪ್ರಾಬಲ್ಯ ಹೊಂದಿದ್ದು, ಕೃಷಿ ಮತ್ತು ತೋಟಗಾರಿಕೆ ಪದವೀಧರರನ್ನು ತೊಡಗಿಸಿಕೊಂಡು ವಿದ್ಯಾರ್ಥಿಗಳಲ್ಲಿ ಉದ್ಯಮ ಶೀಲತಾ ಕೌಶಲ್ಯಾಭಿವೃದ್ದಿ ಕಡೆಗೆ ಒಲವು ಮೂಡಿಸುವಂತೆ ಚಟುವಟಿಕೆ ಕೈಗೊಳ್ಳುವಂತೆ ಮಾಡುವ ಗುರಿ ಹೊಂದಲಾಗಿದೆ.

ಮೂರು ದಿನಗಳ ಸಮಾವೇಶದಲ್ಲಿ ಪ್ರದರ್ಶನ ಮಳಿಗೆ ಹಾಗೂ ಕೃಷಿ ಸ್ಟಾರ್ಟಅಪ್‌ಗಳಿಗೆ ಫಾರ್ಮ ಇನ್‌ಪುಟ್‌ಗಳು-ಅವಕಾಶಗಳು ಮತ್ತು ಸವಾಲುಗಳು, ಹೊಸ ಯುಗದ ಕೃಷಿಕರಿಗೆ ಹೈಟೆಕ್ ಕೃಷಿ, ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ, ತೋಟದಿಂದ ತಟ್ಟಿಗೆ, ಯಾಂತ್ರೀಕರಣ ಮತ್ತು ಸ್ವಯಂ ಚಾಲಿತ ಯಾಂತ್ರಿಕ ವ್ಯವಸ್ಥೆ ಹಾಗೂ ಅಗ್ರಿ-ಸ್ಟಾರ್ಟಅಪ್‌ಗಳಿಗಾಗಿ ಮಾರುಕಟ್ಟೆ ಸಂಪರ್ಕಗಳು ಮತ್ತು ನೆಟ್‌ವರ್ಕಿಂಗ್ ಅಂಶಗಳು ಮತ್ತು ಅನುದಾನ ಕುರಿತು ೬ ತಾಂತ್ರಿಕ ಅಧಿವೇಶನಗಳು ಒಳಗೊಂಡಿವೆ ಎಂದರು.

ಹ್ಯಾಕಥಾನ್ ಸಹ ಆಯೋಜಿಸಿದ್ದು, ಮೂರು ವಿಭಿನ್ನ ವಿಷಯಗಳ ಅಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆ ಹೆಚ್ಚಿಸುವ ತಂತ್ರಗಳು ಮತ್ತು ವಿಧಾನಗಳು, ಕ್ರಾಪ್ ಮಾಡೆಲಿಂಗ್ ಮತ್ತು ಮಾರುಕಟ್ಟೆ ಮುನ್ಸೂಚನೆ ಥೀಮ್ ೩ ರಲ್ಲಿ ಎ೧ ತಂತ್ರಜ್ಞಾನಗಳ ಅಪ್ಲಿಕೇಶನ್, ವರ್ಧಿತ ಬೆಳೆ ಬೆಳವಣಿಗೆಗೆ ಸಸ್ಯ ಆಧಾರಿತ ಉತ್ಪನ್ನಗಳ ಅಭಿವೃದ್ದಿ, ಫಾರ್ಮ ಟು ಪೋರ್ಕ ವಿಷಯಗಳಡಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಪ್ರಥಮ ೨೫ ಸಾವಿರ ರೂ., ದ್ವಿತೀಯ ೧೫ ಸಾವಿರ ರೂ. ಹಾಗೂ ತೃತೀಯ ೧೦ ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತಿದೆ ಎಂದರು.

ತೋವಿವಿಯ ಪ್ರಧಾನ ಸಂಶೋಧಕ ಡಾ.ಆರ್.ಕೆ.ಮೇಸ್ತಾ ಮಾತನಾಡಿ, ಈ ಸಮಾವೇಶದ ಉದ್ದೇಶ ವಿಶ್ವವಿದ್ಯಾಲಯಗಳಿಗೆ ಮೂಲಭೂತ ಸೌಲಭ್ಯ ಒದಗಿಸುವದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ದಿಗೆ ಉತ್ತೇಜನ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ರಾಜ್ಯ ಸರಕಾರದಿಂದ ಶೇ.೨೦ ರಷ್ಟು ಅನುದಾನದ ಸಹಕಾರ ದೊರೆಯಲಿದೆ. ಅಮೇರಿಕಾ, ಪೋಲಂಡ ಸೇರಿದಂತೆ ಇತರೆ ದೇಶದಲ್ಲಿರುವ ಪತಿಷ್ಠಿತ ವಿಶ್ವಿವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸಲಾಗುತ್ತಿದೆ. ಬೋದಕರಿಗೂ ಸಹ ತರಬೇತಿಗಾಗಿ ವಿದೇಶದಕ್ಕೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತೋವಿವಿಯ ರಿಜಿಸ್ಟರ ಡಾ.ಟಿ.ಬಿ.ಅಲ್ಲೋಳ್ಳಿ, ಸಹ ಪ್ರಧಾನ ಸಂಶೋಧಕರಾದ ಡಾ.ಐ.ಬಿ.ಬಿರಾದಾರ, ಡಾ.ವೆಂಕಟೇಶಲು, ಸಂವಹಣಾ ಕೇಂದ್ರದ ಡಾ.ಎಸ್.ಶಶಿಕುಮಾರ, ತೋವಿವಿಯ ಉಪ ಹಣಕಾಸು ನಿಯಂತ್ರಣಾಧಿಕಾರಿ ಡಾ.ಡಿ.ಎಲ್.ಸುತಗಟ್ಟಿ ಉಪಸ್ಥಿತರಿದ್ದರು.

Nimma Suddi
";