ಬೆಂಗಳೂರು: ಹಂತ, ಹಂತವಾಗಿ ಬೆಂಗಳೂರನ್ನು ವಿಶ್ವಮಾನ್ಯ ನಗರವನ್ನಾಗಿ ನಿರ್ಮಾಣ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದರು.
ಬೆಂಗಳೂರಿನಲ್ಲಿ ನಡೆದ 54 ನೇ ವಿಶ್ವ ವ್ಯಾಪಾರ ಸಮಾವೇಶದಲ್ಲಿ ಮಾತಮಾಡಿ, ಭಾರತದ ನಾನಾ ಮೂಲೆಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಬೆಂಗಳೂರಿಗೆ ಬರುತ್ತಿದ್ದು, ಬೆಂಗಳೂರು ದೇಶದ ಶೈಕ್ಷಣಿಕ ರಾಜಧಾನಿಯಾಗಿ ಬೆಳೆಯುತ್ತಿದೆ ಎಂದರು.
ನಮ್ಮ ರಾಜ್ಯದಲ್ಲಿ 52 ವಿಶ್ವವಿದ್ಯಾಲಯಗಳು, 234 ಎಂಜಿನಿಯರಿಂಗ್ ಕಾಲೇಜುಗಳು, 55 ಮೆಡಿಕಲ್, 1 ಸಾವಿರಕ್ಕೂ ಹೆಚ್ಚು ಪ್ಯಾರಾ ಮೆಡಿಕಲ್ ಕಾಲೇಜುಗಳಿವೆ. ಈ ಹಿಂದೆ ಸಿಇಟಿ ಪರೀಕ್ಷೆ ಬರೆಯಲು ಇಡೀ ದೇಶದ ಮೂಲೆ, ಮೂಲೆಯಿಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಬರುತ್ತಿದ್ದರು ಎಂದು ಹೇಳಿದರು.
ದೇಶದ 4 ನೇ ದೊಡ್ಡ ಕೌಶಲ್ಯಧಾರಿತ ಮಾನವ ಸಂಪನ್ಮೂಲ ಹೊಂದಿರುವ ರಾಜ್ಯ ಕರ್ನಾಟಕ. ಕಳೆದ ಎರಡು ವರ್ಷಗಳಲ್ಲಿ 27 ಸಾವಿರ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ಸಂವಹನ ಪದವಿ ಪಡೆದಿದ್ದು, 20 ಸಾವಿರಕ್ಕೂ ಹೆಚ್ಚು ಆಟೋಮೋಟಿವ್ ವಿನ್ಯಾಸಕಾರರು, ಚಿಪ್ ತಂತ್ರಜ್ಞರು, 10 ಸಾವಿರ ಇತರೇ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಎಂದು ಹಾರ್ವರ್ಡ್ ಉದ್ಯಮ ಸಮೀಕ್ಷಾಕಾರರು ತಿಳಿಸಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಪಿಎಚ್ ಡಿ ಪದವೀಧರರನ್ನು ಹೊಂದಿರುವ ರಾಜ್ಯ ನಮ್ಮದು ಎಂದು ವಿವರಿಸಿದರು.