This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsLocal NewsState News

Chaitra Kundapura : ಫೈರ್‌ ಬ್ರಾಂಡ್‌ ವಂಚಕಿ ಚೈತ್ರಾ ಕುಂದಾಪುರ ಟೀಮ್‌ಗೆ 10 ದಿನಗಳ ಸಿಸಿಬಿ ಕಸ್ಟಡಿ; ಮುಂದುವರಿದ ಹೈಡ್ರಾಮಾ

Chaitra Kundapura : ಫೈರ್‌ ಬ್ರಾಂಡ್‌ ವಂಚಕಿ ಚೈತ್ರಾ ಕುಂದಾಪುರ ಟೀಮ್‌ಗೆ 10 ದಿನಗಳ ಸಿಸಿಬಿ ಕಸ್ಟಡಿ; ಮುಂದುವರಿದ ಹೈಡ್ರಾಮಾ

ಬೆಂಗಳೂರು: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ (Byndur Assembly Constituency) ಬಿಜೆಪಿ ಟಿಕೆಟ್‌ (BJP Ticket) ಕೊಡಿಸುವುದಾಗಿ ನಂಬಿಸಿ ಬೆಂಗಳೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ (Govinda Poojari) ಅವರ ಕೈಯಿಂದ 5 ಕೋಟಿ ರೂ. ವಸೂಲಿ ಮಾಡಿ ಬಳಿಕ ವಂಚಿಸಿದ ಆರೋಪ ಎದುರಿಸುತ್ತಿರುವ ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapura) ಮತ್ತು ಇತರ ನಾಲ್ಕು ಮಂದಿಗೆ 1೦ ದಿನಗಳ ಸಿಸಿಬಿ ಕಸ್ಟಡಿ (10 days of CCB Custody) ವಿಧಿಸಲಾಗಿದೆ.

ಮಂಗಳವಾರ ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಬಂಧಿತರಾದ ಈ ಆರೋಪಿಗಳನ್ನು ಬುಧವಾರ ಮಧ್ಯಾಹ್ನ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ತಮಗೆ ಒಪ್ಪಿಸಬೇಕು ಎಂದು ಕೇಳಿದರು. ನ್ಯಾಯಾಧೀಶರು ಎಲ್ಲ ವಿವರಗಳನ್ನು ಪಡೆದು ಐವರು ಆರೋಪಿಗಳನ್ನು 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಿದರು.

Chaithra Kundapura fraud
ಗೋವಿಂದ ಪೂಜಾರಿ ಅವರು ತನಗೆ ವಂಚನೆ ನಡೆದಿದೆ ಎಂದು ಆರೋಪಿಸಿ ಸೆಪ್ಟೆಂಬರ್‌ 8ರಂದು ಬಂಡೇಪಾಳ್ಯ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ನೀಡಿದ್ದರು. ಇದನ್ನು ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಗುಲ್ಬರ್ಗಾ, ಚಿಕ್ಕಮಗಳೂರು ಉಡುಪಿಯಲ್ಲಿ ಕಾರ್ಯಾಚರಣೆ ನಡೆಸಿ ಒಟ್ಟು ಆರು ಮಂದಿಯನ್ನು ಬಂಧಿಸಿದೆ. ಚಿಕ್ಕಮಗಳೂರಿನಲ್ಲಿ ಕಡೂರು ನಿವಾಸಿ ಹಾಗೂ ಬಿಜೆಪಿಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್‌ ಕುಮಾರ್‌, ಕಾರು ಚಾಲಕ ಧನರಾಜ್‌ ಮತ್ತು ರಮೇಶ್‌ ಎಂಬಾತನನ್ನು ಬಂಧಿಸಿದ್ದರೆ ಉಡುಪಿಯಲ್ಲಿ ಚೈತ್ರಾ ಕುಂದಾಪುರ, ಶ್ರೀಕಾಂತ್‌ ನಾಯಕ್‌ ಎಂಬವರನ್ನು ಬಂಧಿಸಿದೆ. ಈ ಐದು ಮಂದಿಯನ್ನು ಬೆಳಗ್ಗೆ ಬೆಂಗಳೂರಿಗೆ ಕರೆತಂದು ಸಿಸಿಬಿ ಕಚೇರಿಯಲ್ಲಿ ಇರಿಸಲಾಗಿತ್ತು. ಬುಧವಾರ ಸಂಜೆ ಅವರನ್ನು 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಪ್ರಾಥಮಿಕ ಮಾಹಿತಿಗಳನ್ನು ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯಾಗಿರುವ ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿಯ ಹಿರೇಹಡಗಲಿ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ ಅವರನ್ನು ಕೂಡಾ ಸಿಸಿಬಿ ವಶಕ್ಕೆ ಪಡೆದಿದ್ದು ಬೆಂಗಳೂರಿಗೆ ಕರೆದುಕೊಂಡು ಬರುತ್ತಿದೆ.

ಕೋರ್ಟ್‌ನಲ್ಲೂ ಹೈಡ್ರಾಮಾ ಸೃಷ್ಟಿಸಿದ ಚೈತ್ರಾ ಕುಂದಾಪುರ
ಮಂಗಳವಾರ ರಾತ್ರಿ ಉಡುಪಿಯ ಶ್ರೀಕೃಷ್ಣ ಮಠದ ಬಳಿ ಸಿಸಿಬಿ ಪೊಲೀಸರು ಬಂಧಿಸಿದಾಗ ಚೈತ್ರಾ ಕುಂದಾಪುರ ಹೈಡ್ರಾಮಾ ಮಾಡಿದ್ದರು. ಬೆಂಗಳೂರಿನ ಸಿಸಿಬಿ ಕಚೇರಿಯಲ್ಲೂ ನನಗೆ ಕೋರ್ಟ್‌ಗೆ ಪ್ರೊಡ್ಯೂಸ್‌ ಮಾಡಿದ ಕೂಡಲೇ ಜಾಮೀನು ಸಿಗುತ್ತದೆ.. ಈಗಲೇ ಬಿಟ್ಟು ಬಿಟ್ಟರೆ ಒಳ್ಳೆಯದು ಎಂದಿದ್ದರು.

ಮುಂದೆ ಕೋರ್ಟ್‌ಗೆ ಹಾಜರುಪಡಿಸುವುದು ಖಚಿತವಾಗುತ್ತಿದ್ದಂತೆಯೇ ಎಸಿಪಿ ರೀನಾ ಸುವರ್ಣ ಮುಂದೆ ಚೈತ್ರಾ ಕಣ್ಣೀರು ಹಾಕಿದರು. ಬಳಿಕ ಕೋರ್ಟ್‌ಗೆ ಹಾಜರುಪಡಿಸಿದ ಸಂದರ್ಭದಲ್ಲಿ ನ್ಯಾಯಾಧೀಶರ ಮುಂದೆಯೂ ಕಣ್ಣೀರಿಟ್ಟರು. ಮನೆಯವರ ಭೇಟಿಗೆ ಅವಕಾಶ ನೀಡಿಲ್ಲ. ಕಂಪ್ಲೇಂಟ್‌ ಕಾಪಿ ಕೂಡಾ ಓದಲು ಬಿಟ್ಟಿಲ್ಲ. ನನ್ನ ಮೇಲಿರುವ ಪ್ರಕರಣ ಏನು ಎನ್ನುವುದೇ ಗೊತ್ತಿಲ್ಲ ಎಂದು ಚೈತ್ರಾ ಕುಂದಾಪುರ ಅಳಲು ತೋಡಿಕೊಂಡರು. ನ್ಯಾಯಾಧೀಶರು ಆಕೆಗೆ ಎಲ್ಲ ವಿವರಗಳನ್ನು ನೀಡುವಂತೆ ಸಿಸಿಬಿ ಪೊಲೀಸರಿಗೆ ಆದೇಶ ನೀಡಿದರು.

ಏನಿದು ಬೈಂದೂರು ಬಿಜೆಪಿ ಟಿಕೆಟ್‌ ಹೆಸರಲ್ಲಿ 5 ಕೋಟಿ ರೂ. ವಂಚನೆ ಪ್ರಕರಣ?
ಬೆಂಗಳೂರಿನ ಉದ್ಯಮಿ ಗೋವಿಂದ ಪೂಜಾರಿ ಅವರು ಸಮಾಜ ಸೇವಕರಾಗಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಕಣಕ್ಕಿಳಿಯಲು ಆಸಕ್ತರಾಗಿದ್ದರು. ಹಿತೈಷಿಗಳ ಸಲಹೆ ಮೇರೆಗೆ ಅವರು ಚೈತ್ರಾ ಕುಂದಾಪುರ ಅವರನ್ನು ಸಂಪರ್ಕಿಸಿದ್ದರು.

ತನಗೆ ಬಿಜೆಪಿ, ಆರೆಸ್ಸೆಸ್‌ನ ಉನ್ನತ ಮಟ್ಟದ ನಾಯಕರ ಸಂಪರ್ಕ ಇರುವುದಾಗಿ ಹೇಳಿಕೊಳ್ಳುತ್ತಿರುವ ಚೈತ್ರಾ ಕುಂದಾಪುರ ಮತ್ತು ತಂಡದವರು ಈ ಮನವಿಯನ್ನು ದುಡ್ಡು ಮಾಡುವ ದಂಧೆಯಾಗಿ ಪರಿವರ್ತಿಸಲು ಪ್ಲ್ಯಾನ್‌ ಮಾಡಿಕೊಂಡರು. ಈ ರೀತಿ ಟಿಕೆಟ್‌ ಗಿಟ್ಟಿಸಿಕೊಳ್ಳಲು ಆರೆಸ್ಸೆಸ್‌ನ ಉನ್ನತ ನಾಯಕರು, ಬಿಜೆಪಿ ಉನ್ನತ ನಾಯಕರು ಸ್ವಾಮೀಜಿಗಳ ಶಿಫಾರಸು ಬೇಕು ಎಂಬ ಸಬೂಬು ನೀಡಿದರು. ಚಿಕ್ಕಮಗಳೂರಿನಲ್ಲಿ ಒಬ್ಬ ನಕಲಿ ಆರ್‌ಎಸ್‌ಎಸ್‌ ಪ್ರಚಾರಕನನ್ನು ಸೃಷ್ಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸುವಂತೆ ನಾಟಕ ಸೃಷ್ಟಿ ಮಾಡಿದರು. ಅವರು ಐವತ್ತು ಲಕ್ಷ ರೂ. ಕೇಳಿದರು.

ಬೆಂಗಳೂರಿನಲ್ಲಿ ಕಬಾಬ್‌ ವ್ಯಾಪಾರಿಯೊಬ್ಬನನ್ನು ಬಿಜೆಪಿಯ ಉನ್ನತ ನಾಯಕರೆಂದು ಬಿಂಬಿಸಿ ಟಿಕೆಟ್‌ ಪಕ್ಕಾ ಎಂದು ಹೇಳಿಸಿದರು. ಅವರು ಮೂರು ಕೋಟಿ ನೀಡುವಂತೆ ಸೂಚನೆ ನೀಡಿದರು. ಇನ್ನೊಂದು ಕಡೆ ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿಯ ಹಿರೇಹಡಗಲಿ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ ಅವರಲ್ಲೂ ಶಿಫಾರಸು ಮಾಡಿಸಿದರು. ಅವರು ಕೇಳಿದ್ದು 1.5 ಕೋಟಿ.

ಹೀಗೆ ಮೂವರು ವ್ಯಕ್ತಿಗಳು ಕೇಳಿದ ಒಟ್ಟು 5 ಕೋಟಿ ರೂ. ಹಣವನ್ನು ಚೈತ್ರಾ ಕುಂದಾಪುರ ಮತ್ತು ತಂಡ ಕಬ್ಜಾ ಮಾಡಿಕೊಂಡಿತ್ತು. ಕೊನೆಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಸಿಗದೆ ಇದ್ದಾಗ ಗೋವಿಂದ ಪೂಜಾರಿ ಸಿಟ್ಟಿಗೆದ್ದರು.

ಆಗ ಹೊಸದೊಂದು ನಾಟಕ ಶುರು ಮಾಡಿದ ಚೈತ್ರಾ ಮತ್ತು ಟೀಮ್‌ ತಮ್ಮಿಂದ ಟಿಕೆಟ್‌ ಕೊಡಿಸುವುದಾಗಿ ಹಣ ಪಡೆದ ಚಿಕ್ಕಮಗಳೂರಿನ ಆರೆಸ್ಸೆಸ್‌ ಪ್ರಚಾರಕ ವಿಶ್ವನಾಥ್‌ಜೀ ಅವರು ತೀರಿಕೊಂಡಿದ್ದಾರೆ ಎಂದು ಹೇಳಿತು. ಆದರೆ, ಈ ಹಂತದಲ್ಲಿ ಗೋವಿಂದ ಪೂಜಾರಿ ಅವರಿಗೆ ಸಂಶಯ ಬಂದು ವಿಚಾರಣೆ ಶುರು ಮಾಡಿದರು. ಆಗ ಇಡೀ ಟೀಮ್‌ನ ಎಲ್ಲ ನಾಟಕಗಳು ಬಯಲಾದವು.

ವಿಶ್ವನಾಥ್‌ಜೀ ಎಂಬ ವ್ಯಕ್ತಿಯೇ ಸುಳ್ಳು, ಬಿಜೆಪಿ ನಾಯಕನೆಂಬ ಹೆಸರಿನಲ್ಲಿ ಬಂದವನು ಸುಳ್ಳು ಎನ್ನುವುದನ್ನು ತಮ್ಮದೇ ತನಿಖೆಯಲ್ಲಿ ಕಂಡುಕೊಂಡ ಗೋವಿಂದ ಪೂಜಾರಿ ಅವರು ಇದೆಲ್ಲವೂ ಚೈತ್ರಾ ಕುಂದಾಪುರ ಮತ್ತು ಗಗನ್‌ ಕಡೂರು ಮಾಡಿದ ಪ್ಲ್ಯಾನ್‌ ಎಂಬುದಕ್ಕೆ ಎಲ್ಲ ದಾಖಲೆಗಳನ್ನು ಇಟ್ಟು ಪೊಲೀಸರಿಗೆ ದೂರು ನೀಡಿದ್ದರು. ಇಷ್ಟೆಲ್ಲ ಆದರೂ ಚೈತ್ರಾ ಎಂಡ್‌ ಟೀಮ್‌ ತಮಗೇನೂ ಗೊತ್ತಿಲ್ಲ ಎಂದು ಹೇಳುತ್ತಿದೆ.

";