ಬಾಗಲಕೋಟೆ: ಆರ್ಎಸ್ಎಸ್ ಹಾಗೂ ಬಿಜೆಪಿಗೆ ಬರುತ್ತಿರುವ ಹಣದ ಮೂಲದ ಬಗ್ಗೆ ತನಿಖೆ ನಡೆಸಬೇಕು ಎಂದು ಸಚಿವ ವಿಜಯಾನಂದ ಕಾಶಪ್ಪನವರ ಆಗ್ರಹಿಸಿದರು.
ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ಸಂಘಟನೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಬೇಕಾದರೆ ಅದರ ಹಣಕಾಸಿನ ವ್ಯವಹಾರಗಳು ಪಾರದರ್ಶಕವಾಗಿರಬೇಕು ಎಂದು ಹೇಳಿದರು.
ಆರ್ಎಸ್ಎಸ್ ನೋಂದಣಿ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಶಪ್ಪನವರ, ಯಾವುದೇ ಸಂಘಟನೆ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅದು ಕಾನೂನುಬದ್ಧವಾಗಿ ನೋಂದಣಿಯಾಗಿರಬೇಕು ಎಂಬ ವಿಚಾರ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ. ಈ ಸಂಬಂಧ ಗೃಹ ಸಚಿವರು ಕಾನೂನು ತರುವ ಕುರಿತು ಮುಂದಾಗಿದ್ದು, ಸದ್ಯ ಈ ವಿಚಾರ ಚರ್ಚೆಯ ಹಂತದಲ್ಲಿದೆ ಎಂದರು.
“ಬಿಜೆಪಿಯಲ್ಲಿ ಇಷ್ಟೊಂದು ಪ್ರಮಾಣದ ಹಣ ಎಲ್ಲಿಂದ ಬಂದಿದೆ? ಆರ್ಎಸ್ಎಸ್ನಲ್ಲಿರುವ ಹಣದ ಮೂಲವೇನು ಎಂಬುದನ್ನು ತನಿಖೆ ಮಾಡಬೇಕು. ಈ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ಸಿಬಿಐ ತನಿಖೆ ನಡೆಸಬೇಕು” ಎಂದು ಸಚಿವರು ಆಗ್ರಹಿಸಿದರು.
ವಿದೇಶಗಳಿಂದ ವಿವಿಧ ಸಂಘಟನೆಗಳಿಗೆ ಬರುತ್ತಿರುವ ಅನುದಾನ ಹಾಗೂ ಹಣಕಾಸಿನ ಮೂಲಗಳ ಮೇಲೆ ನಿಯಂತ್ರಣ ಇರಬೇಕಾಗಿದೆ. ಸಂಘಟನೆಗಳು ನೋಂದಣಿಯಾಗಿದ್ದರೆ ಅವುಗಳಿಗೆ ಬರುವ ಹಣದ ಮೂಲ, ಅನುದಾನ ಹಾಗೂ ಹಣಕಾಸಿನ ವ್ಯವಹಾರಗಳ ವಿವರಗಳನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ದೇಶದ ಸಂವಿಧಾನ ಹಾಗೂ ಕಾನೂನಿನ ಅಡಿಯಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು. ಆದರೆ ಕೆಲವರು ಸಂವಿಧಾನದ ಬಗ್ಗೆ ಅರಿವಿಲ್ಲದಂತೆ ಹಾಗೂ ದೇಶದ ಕಾನೂನುಗಳನ್ನು ಪಾಲಿಸುವ ಅಗತ್ಯವಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಕಾಶಪ್ಪನವರ ಆರೋಪಿಸಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿನ ಆರ್ಎಸ್ಎಸ್ನ ಪಾತ್ರದ ಬಗ್ಗೆಯೂ ಪ್ರಶ್ನಿಸಿದ ಅವರು, ದೇಶಕ್ಕೆ ಸ್ವಾತಂತ್ರ್ಯ ತರುವ ಸಂದರ್ಭದಲ್ಲಿ ಸಂಘಟನೆಯ ಪಾತ್ರವೇನು ಎಂಬುದನ್ನು ಪರಿಶೀಲಿಸಬೇಕು ಎಂದರು.
“ಲಾಠಿ ಹಿಡಿದು ತರಬೇತಿ ನೀಡುವುದರಿಂದ ದೇಶದ ರಕ್ಷಣೆ ಸಾಧ್ಯವಿಲ್ಲ. ಸಂಘಟನೆಯ ಮೂಲಕ ಜನರನ್ನು ಹೆದರಿಸಿ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದಲೇ ನೋಂದಣಿಗೆ ಸಿದ್ಧರಿಲ್ಲ” ಎಂದು ಆರ್ಎಸ್ಎಸ್ ವಿರುದ್ಧ ಸಚಿವ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದರು.
ಸಂಘಟನೆಗಳ ಹಣಕಾಸಿನ ವ್ಯವಹಾರಗಳು ಪಾರದರ್ಶಕವಾಗಿರಬೇಕು ಹಾಗೂ ಕಾನೂನು ಮತ್ತು ಸಂವಿಧಾನಕ್ಕೆ ಎಲ್ಲರೂ ಗೌರವ ನೀಡಬೇಕು ಎಂದು ಅವರು ಹೇಳಿದರು.






