This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

State News

ಪತ್ರಿಕಾ ರಂಗದ ಸೇವೆ ವಿಶಿಷ್ಟವಾದದ್ದು:ಪಿ.ಎಚ್.ಪೂಜಾರ

ಈಶ್ವರ ಶೆಟ್ಟರಗೆ, ಮಹೇಶ ಮನ್ನಯ್ಯನವರಮಠರಿಗೆ ಪ್ರಶಸ್ತಿ

ನೈಜ, ವಸ್ತುನಿಷ್ಠ ವರದಿಗಳನ್ನು ನೀಡಲು ಪತ್ರಕರ್ತರಿಗೆ ಕರೆ

ನಿಮ್ಮ ಸುದ್ದಿ ಬಾಗಲಕೋಟೆ

ಸರಕಾರ ಮತ್ತು ಜನತೆಯ ಮಧ್ಯೆ ಸಂಪರ್ಕಕೊಂಡಿಯಾಗಿ ಕಾರ‍್ಯ ನಿರ್ವಹಿಸಿ ಸಮಾಜದ ಓರೆ, ಕೊರೆಗಳನ್ನು ತಿದ್ದಿ ತಿಡುವ ಜೊತೆಗೆ ಸಾಧಕ – ಬಾಧಕಗಳನ್ನು ವಿಮರ್ಶಿಸಿ ಅವುಗಳನ್ನು ಜನತೆಯ ನಿರ್ಧಾರಕ್ಕೆ ಬಿಡುವ ಪತ್ರಿಕಾ ಕ್ಷೇತ್ರ ಹಾಗೂ ಪರ್ತಕರ್ತರ ಸೇವೆ ವಿಶಿಷ್ಟವಾದದ್ದು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಅವರು ಹೇಳಿದರು.

ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಲಾದಗಿ ಹಣ್ಣು ಬೆಳೆಗಾರರ ಸಂಘದ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆಯ ಅಂಗವಾಗಿ ಕಲಾದಗಿಯ ಹಣ್ಣು ಬೆಳೆಗಾರರ ಸಂಘದ ಆವರಣ ಚಿಕ್ಕು ಉದ್ಯಾನವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರಧಾನ ಹಾಗೂ ಉಪನ್ಯಾಸ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಜಿಲ್ಲಾ ಕಾನಿಪದಿಂದ ಕೊಡಮಾಡುವ ಹಿರಿಯ ಪತ್ರಕರ್ತ ಪ್ರಶಸ್ತಿಯನ್ನು ಈಶ್ವರ ಶೆಟ್ಟರ ಅವರಿಗೆ ಹಾಗೂ ಗ್ರಾಮೀಣ ಪತ್ರಕರ್ತ ಪ್ರಶಸ್ತಿಯನ್ನು ಮಹೇಶ ಮನ್ನಯ್ಯನವರಮಠ ಅವರಿಗೆ ವಿತಿರಿಸಿ ಮಾತನಾಡಿದ ಅವರು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮೂರು ಅಂಗಗಳ ಜೊತೆಗೆ ನಾಲ್ಕನೇ ಅಂಗವೆAದು ಪರಿಗಣಿಸಿರುವ ಪತ್ರಿಕಾ ರಂಗದ ಸೇವೆ ಅನನ್ಯವಾದದು ಎಂದು ಹೇಳಿದರು.

ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಜನತೆಗೆ ಮಾಹಿತಿ ನೀಡಿ ಸ್ವಾತಂತ್ರ‍್ಯ ಪಡೆದುಕೊಳ್ಳುವಲ್ಲಿ, ಸ್ವಾತಂತ್ರ ನಂತರ ಹಾಗೂ ಇಂದಿನವರೆಗೂ ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಜನತೆಗೆ ಮಾಹಿತಿಯ ಸೇವೆ ನೀಡುತ್ತಿರುವ ಪತ್ರಿಕಾರಂಗದ ಕಾರ‍್ಯ ಶ್ಲಾಘನೀಯ, ಮುಂದೆಯೂ ಸಹ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಹಾಗೂ ನಾಡಿನ ಸರ್ವತೋಮುಖ ಅಭಿವೃದ್ಧಿಗೆ, ಜನತೆಯ ವಿಶ್ವಾಸದೊಂದಿಗೆ ಸೇವೆ ಇನ್ನಷ್ಟು ವಿಸ್ತಾರಗೊಳ್ಳಲಿ, ಸತ್ಯ, ವಸ್ತುನಿಷ್ಠ ವರದಿಗಳು ಮೂಡಿಬಂದು ಸಮಾಜ ಹಾಗೂ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಲಿ ಎಂದರು.

ಸ್ವಾತಂತ್ರ ಸಂಗ್ರಾಮದಿಂದ  ತನ್ನ ಪಾತ್ರ ನಿರ್ವಹಿಸುತ್ತಿರುವ ಪತ್ರಿಕಾ ರಂಗ ಬ್ರಿಟಿಷರ ದೇಶ ಬಿಟ್ಟು ತೊಲಗಲು ಪ್ರಮುಖ ಅಸ್ತ್ರವಾಗಿತ್ತು. ಇಂದು ಬದಲಾದ ಕಾಲ ಘಟ್ಟದಲ್ಲಿ ಸ್ವರೂಪ ಬದಲಿಸಿಕೊಂಡಿದೆ. ತಂತ್ರಜ್ಞಾನ ಯುಗದಲ್ಲಿ ಪೈಪೋಟಿ ನೀಡಬೇಕಿದೆ. ಯು ಟ್ಯೂಬ್, ಆನಲೈನ್ ನ್ಯೂಸ್ ಪರಿಣಾಮ ಮುದ್ರಣ ಪತ್ರಿಕೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಆದರು ಸಹ ಪತ್ರಿಕೆಗಳಲ್ಲಿನ ಓದಿನ ಖುಷಿ, ನೆಮ್ಮದಿ, ನೆನಪಿನ ಶಕ್ತಿ ಬೇರೆ ಎಲ್ಲಿಯೂ ಸಿಗದು. ಟಿಆರ್‌ಪಿಗಾಗಿ ಚಾನಲ್‌ಗಳಲ್ಲಿ ಬಿತ್ತರವಾಗುವ ಸುದ್ದಿಗಳಲ್ಲಿ ಮೌಲ್ಯ ಕ್ಷಿಣಿಸಿದೆ. ನಿಖರ, ವಸ್ತು ನಿಷ್ಠ ಸುದ್ದಿಗಳು ಬೇಕಿದೆ. ಮಾಧ್ಯಮ ರಂಗಕ್ಕೆ ಬಾಗಲಕೋಟೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದರು.

ಜುಲೈ ತಿಂಗಳು ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ, ಈ ಎರಡು ಕ್ಷೇತ್ರದವರು ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ, ಜನತೆಗೆ ವೈದ್ಯರು ಉತ್ತಮ ಆರೋಗ್ಯ ನೀಡಿದರೆ, ಪತ್ರಕರ್ತರು ತಮ್ಮ ವರದಿಗಳ ಮೂಲಕ ಉತ್ತಮ ಸಮಾಜ ನಿರ್ಮಾಣದ ಸೇವೆ ನೀಡುತ್ತಾರೆ ಎಂದು ತಿಳಿಸಿದ ಪೂಜಾರ ಅವರು ಸರಕಾರದ ತಪ್ಪುಗಳನ್ನು ಎತ್ತಿ ತೋರಿಸಿ ಎಚ್ಚರಿಸುವ ಜೊತೆಗೆ ಜನತೆಯ ಸಮಸ್ಯೆಗಳು, ಜ್ವಲಂತ ಸಮಸ್ಯೆಗಳ ಕುರಿತು ಸರಕಾರಕ್ಕೆ ಗಮನ ಸೆಳೆದು ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪತ್ರಕರ್ತರ ಸೇವೆ ಶ್ಲಾಘನೀಯ ಎಂದರು.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೈಜ ಹಾಗೂ ವಸ್ತುನಿಷ್ಠ ವರದಿಯನ್ನು ನೀಡುವದು ಪತ್ರಕರ್ತನ ಜವಾಬ್ದಾರಿಯಾಗಿದೆ ಎಂದು ವಿವರಿಸಿ ಪತ್ರಿಕೆಗಳು, ಟಿವಿ ಮಾಧ್ಯಮ ಇಂದು ಟಿಆರ್‌ಪಿಗಾಗಿ ಪೈಪೋಟಿ ಇದೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ಕೋರೋನಾ ಕಾಲಕ್ಕೆ ಯೋಧರಂತೆ ಕರ‍್ಯ ನಿರ್ವಹಿಸಿ ಜನತೆಗೆ, ಸರಕಾರಕ್ಕೆ ನೆರವಾಗಿವೆ ಎಂದು ಪಿ.ಎಚ್. ಪೂಜಾರ ಅವರು ಬಣ್ಣಿಸಿದರು.

ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ ಅವರು ಮಾತನಾಡಿ ಸಮಾಜದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ, ಜನತೆಗೆ ಅಗತ್ಯವಾಗಿರುವ ಸುದ್ದಿಗಳು ಇಂದು ಅಗತ್ಯವಾಗಿದೆ, ಕೇವಲ ರಾಜಕೀಯಕಷ್ಟೆ ಸೀಮಿತವಾಗದೇ ಪ್ರತಿಯೊಂದು ಕ್ಷೇತ್ರದ ಬೆಳವಣಿಗೆಗಳ ಕುರಿತು ಮಾಹಿತಿ ನೀಡಬೇಕು, ವಸ್ತುನಿಷ್ಠ ವರದಿಗಳ ಮೂಲಕ ಈ ಕ್ಷೇತ್ರ ಜನತೆಯ ವಿಶ್ವಾಸವನ್ನು ಹೆಚ್ಚು ಗಳಿಸಿಕೊಳ್ಳಬೇಕಾಗಿದೆ ಎಂದು ಹೇಳಿ ನೈಜ ಹಾಗೂ ವಸ್ತುನಿಷ್ಠ ವರದಿಯನ್ನು ನೀಡುವದು ಪತ್ರಕರ್ತನ ಜವಾಬ್ದಾರಿಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರು ಮಾತನಾಡಿ ತಂತ್ರಜ್ಞಾನ ಯುಗಕ್ಕೆ ಮಾಧ್ಯಮ ರಂಗ ಪೈಪೋಟಿ ನೀಡುತ್ತಿದೆ. ಮಾಧ್ಯಮ ಕೆಲಸ ಸವಾಲಿನ ಕೆಲಸ. ಇಂದು ಮಾಧ್ಯಮ ಹೊಸ ದಿಕ್ಕುನಲ್ಲಿ ನವ ಸ್ವರೂಪದಲ್ಲಿ ಸಾಗುತ್ತಿದೆ. ಪತ್ರಿಕಾ ಪಾತ್ರ ದೊಡ್ಡದಿದೆ. ನಾಡು, ಸಮುದಾಯ ಕಟ್ಟಿ ಬೆಳೆಸುವಲ್ಲಿ ಮತ್ತು ಜಾಗೃತಿ ಗೊಳಿಸುವ ಕಾಯುಕ ಶ್ಲಾಘನೀಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಪಾತ್ರ ಮಹತ್ವದ್ದಾಗಿದೆ ಎಂದರು.

ರಾಜ್ಯ ಕಾನಿಪ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಅವರು ಮಾತನಾಡಿ ಶತಮಾನೋತ್ಸವ ಸಂಭ್ರಮದಲ್ಲಿರುವ ರಾಜ್ಯ ಕಾನಿಪ ಘಟಕ ಒಡೆಯರ ಅವರ ೫೦೦ ರೂ.ಗಳ ದೇಣಿಗೆಯೊಂದಿಗೆ ಡಿ.ವಿ.ಜಿ. ಅವರು ಸ್ಥಾಪಿಸಿರುವ ಈ ಸಂಘ ಇಂದು ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿದೆ ಎಂದು ವಿವರಿಸಿ ಪತ್ರಕರ್ತರು ವಸ್ತು ವರದಿಗಳ ಮೂಲಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಬೇಕು, ಈ ಮೂಲಕ ಜನತೆಯ ವಿಶ್ವಾಸ ಗಳಿಸಿಕೊಳ್ಳಬೇಕೆಂದು ಕರೆ ನೀಡಿ ಪತ್ರಕರ್ತರು ಬಿತ್ತರಿಸುವ ಸುದ್ದಿಗಳ ಎಲ್ಲ ಜ್ಞಾನ ಪಡೆದು ಅದಕ್ಕೆ ಸತ್ಯ ಹಾಗೂ ನಿಖರತೆಯ ಸುದ್ದಿಗಳನ್ನು ಜನತೆಯ ಮುಂದಿಡಬೇಕೆಂದರು.

ಹಿರಿಯ ಪತ್ರಕರ್ತ ಬಂಡು ಕುಲಕರ್ಣಿ ಅವರು ಉಪನ್ಯಾಸ ನೀಡಿ ಸ್ವಾತಂತ್ರ‍್ಯ ಪೂರ್ವ, ನಂತರ ಹಾಗೂ ಕರ್ನಾಟಕ ಏಕೀಕರಣದಲ್ಲಿ ಪತ್ರಿಕೆಗಳ ಸೇವೆ ಅನನ್ಯವಾದದ್ದು, ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಕರ‍್ಯ ನಿರ್ವಹಿಸಿವೆ ಎಂದರು. ಈ ಕ್ಷೇತ್ರ ಅನೇಕ ಬದಲಾವಣೆಗಳನ್ನು ಕಾಣುತ್ತಿದೆ, ಅದರಲ್ಲೂ ಕಳೆದ ೫ ವರ್ಷಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಪ್ರಭಾವ ಸಾಕಷ್ಟು ಬೀರಿದೆ, ಸಧ್ಯ ಪರಿಸ್ಥಿತಿಯಲ್ಲಿಯೂ ಎಲ್ಲರೂ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿಗಳನ್ನು ಹಂಚಿಕೊಳ್ಳುವ ಮೂಲಕ ಪತ್ರಕರ್ತರರಾಗುತ್ತಿದ್ದಾರೆ ಎಂದು ಹೇಳಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಸಹ ಪತ್ರಿಕೆಗಳು, ಟಿವಿ ಮಾಧ್ಯಮಗಳು ಉತ್ತಮ ಕಾರ‍್ಯ ನಿರ್ವಹಿಸಿ ಜನತೆಗೆ ಅಗತ್ಯ ಮಾಹಿತಿ ನೀಡುತ್ತಿವೆ ಎಂದರು. ಇಂದಿನ ದಿನಮಾನಗಳಲ್ಲಿ ಸುಳ್ಳು ಸುದ್ದಿಗಳು ಬಿತ್ತರವಾಗುತ್ತಿರುವದು ಸರಿಯಲ್ಲ, ಇದು ಓದುಗರ ನಂಬಿಕೆ ಹಾಗೂ ವಿಶ್ವಾಸ ಕಳೆದುಕೊಳ್ಳುತ್ತಿದೆ, ಅದಕ್ಕಾಗಿ ವಸ್ತುನಿಷ್ಠ ಹಾಗೂ ನೈಜ ವರದಿಗಳು ಮಾತ್ರ ಜನತೆಯ, ಓದುಗರ ವಿಶ್ವಾಸ, ನಂಬಿಕೆ ಗಳಿಸಿಕೊಳ್ಳಲು ಸಾಧ್ಯ ಈ ದಿಸೆಯಲ್ಲಿ ಪತ್ರಕರ್ತರು ಸುದ್ದಿಗಳನ್ನು ನೀಡುವಾಗ ಅದರ ಎಲ್ಲ ಜ್ಞಾನ ಅರಿತು ಸಂಯಮದಿಂದ ವಸ್ತುನಿಷ್ಠ ಹಾಗೂ ನೈಜ ವರದಿಗಳನ್ನು ಸಮಾಜ, ಜನತೆಗೆ ನೀಡಬೇಕೆಂದು ಕಿವಿಮಾತು ಹೇಳಿದರು.

ದೇಶದಲ್ಲಿ ಗೂಗಲï ಮತ್ತು ಫೇಸಬುಕ್‌ನ ವಾರ್ಷಿಕ ವ್ಯವಹಾರ ೨೯ ಸಾವಿರ ಕೋಟಿ ರೂ.ಗಳಾದರೆ, ದೇಶದ ೯ ಪ್ರಮುಖ ಮಾಧ್ಯಮ ಸಂಸ್ಗೆಳ ವಾರ್ಷಿಕ ವ್ಯವಹಾರ ಕೇವಲ ೨೧ ಸಾವಿರ ಕೋಟಿಯದ್ದಾಗಿದೆ ಎಂದು ಡಿಜಿಟಲ್ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವವನ್ನು ವಿವರಿಸಿದ ಬಂಡು ಕುಲಕರ್ಣಿ ಅವರು ವಿಶ್ವದ ೭೫೦ ಕೋಟಿ ಜನಸಂಖ್ಯೆಯಲ್ಲಿ ೫೫೦ ಕೋಟಿ ಜನಸಂಖ್ಯೆ ಇಂಟರ್‌ನೆಟ್ ಸೇವೆ ಇದೆ, ಅದರಲ್ಲಿ ಭಾರತದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಇಂಟರನೆಟ್ ಸೇವೆ ಮುಂಚೂಣಿಯಲ್ಲಿದೆ ಎಂದು ಹೇಳಿ ಇಂತಹ ಪರಿಸ್ಥಿತಿಯಲ್ಲಿ ಪತ್ರಿಕೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ಇದಕ್ಕಾಗಿ ಪತ್ರಕರ್ತರು ಎಚ್ಚರಿಕೆ ವಹಿಸಿ ಕರ‍್ಯ ನಿರ್ವಹಿಸಿ ಈ ಕ್ಷೇತ್ರಕ್ಕೆ ಶಕ್ತಿ ತುಂಬಬೇಕಾಗಿದೆ ಎಂದರು. ಸುಳ್ಳು ಸುದ್ದಿಗಳು ಕೆಲವೆ ಕ್ಷಣಗಳಲ್ಲಿ ಪ್ರಚಾರಗಿಟ್ಟಿಸಿದರೂ ಸಹ ಅವುಗಳಿಗೆ ಆಯುಷ್ಯು ಕಡಿಮೆ ಎಂದು ಉದಾಹರಣೆ ಸhಹಿತ ವಿವರಿಸಿ ಅದಕ್ಕಾಗಿ ಪ್ರತಿಯೊಬ್ಬರು ಕೊಡುವ ಸುದ್ದಿಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರಬೇಕು, ನೈಜ ಮತ್ತು ವಸ್ತು ವರದಿಗಳನ್ನು ನೀಡಿ ಜನತೆಯ, ಸಮಾಜದ ವಿಶ್ವಾಸ ಗಳಿಸಿಕೊಳ್ಳಬೇಕೆಂದರು.

ಹಿರಿಯ ಪತ್ರಕರ್ತ ಸಿದ್ದು ಕಾಳೋಜಿ ಅವರು ಉಪನ್ಯಾಸ ನೀಡಿ ಉನ್ನತ ಕಾಲ ಘಟ್ಟದಲ್ಲಿ ಪತ್ರಿಕೋದ್ಯಮವಿದೆ. ಬದಲಾವಣೆ ಗಾಳಿ ಬೀಸಿದೆ. ಸಾಂಸ್ಕೃತಿಕ, ಸಾಮಾಜಿಕ ಬದಲಾವಣೆ ಅಂತೆ ಮಾಧ್ಯಮ ರಂಗ ಬದಲಾವಣೆಯಾಗುತ್ತಿದೆ, ಪತ್ರಿಕಾರಂಗದಲ್ಲಿ ತಂತ್ರಜ್ಞಾನದ ಪ್ರಭಾವವಿದೆ. ಸತ್ಯ- ಸುಳ್ಳು ಸುದ್ದಿ ಯಾವುದು ಗೊತ್ತಾಗುತ್ತಿಲ್ಲ. ಸರ್ಕಾರ ಕಚೇರಿ ವಿಡಿಯೋ ಚಿತ್ರಕರಣ ಅನೇಕ ಆವಾಂತರ ಸೃಷ್ಟಿಸಿತು. ವಿವೇಚನೆಯಿಂದ ಸುದ್ದಿ ಮಾಹಿತಿ ಹಂಚಿಕೆಯಾಗಬೇಕು, ತಪ್ಪು ಸಂದೇಶ ರವಾನಿಸಬಾರದು. ಪತ್ರಿಕಾ ರಂಗದಲ್ಲಿ ವಿಫುಲ ಅವಕಾಶಗಳಿವೆ. ಯುವಕರು ಸದ್ಬಳಕೆ ಮಾಡಿಕೊಳ್ಳಬೇಕು. ವ್ಯಕ್ತಿ ದೃಷ್ಟಿಕೋನದಿಂದ ಮಕ್ಕಳಿಗೆ ತರಬೇತಿÀ ಮಾಡಲಾಗುತ್ತಿದೆ. ಆದರೇ ಸಾಮಾಜಿಕ ಹೊಣೆಗಾರಿಕೆ, ಜವಾಬ್ದಾರಿ ಕಲಿಸಬೇಕಿದೆ. ಪ್ರಭಾವಿ ಮಾಧ್ಯಮವಾಗಿರುವ ಕಾರಣಕ್ಕೆ ಸುದ್ದಿಯಲ್ಲಿ ಪಾರದರ್ಶಕತೆ ಇರಬೇಕು. ಯಾವುದೇ ಸರಿ, ತಪುö್ಪ ಸರಿಯಾಗಿ ನಿರ್ಣಯಿಸಬೇಕು. ಮಾದರಿ ಮೌಲ್ಯಗಳನ್ನು ಬಿತ್ತುವತ್ತ ಗಮನಹರಿಸಬೇಕು. ಸಾಮಾಜದ ಸ್ವಾಸ್ಥ÷್ಯ ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.

ಹಿರಿಯ ಪತ್ರಕರ್ತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಈಶ್ವರ ಶೆಟ್ಟರ ಅವರು ೩೦ ವರ್ಷಗಳ ಸೇವೆಯಲ್ಲಿ ಅನೇಕ ಪ್ರಶಸ್ತಿಗಳು ತಮಗೆ ಸಂದಿವೆ, ಜಿಲ್ಲಾ ಮಟ್ಟದಲ್ಲಿ ಹಿರಿಯ ಪತ್ರಕರ್ತ ಪ್ರಶಸ್ತಿ ತಮಗೆ ಸಂದಿರುವದು ಸಂತಸ ತಂದಿದೆ, ಈ ಪ್ರಶಸ್ತಿ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿ ಮುಳುಗಡೆ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಈ ಹಿಂದೆ ಹಿರಿಯ ಪತ್ರಕರ್ತರು ಮಾಡಿದ ಹೋರಾಟ, ಸಲ್ಲಿಸಿದ ಸೇವೆ ಅನನ್ಯವಾಗಿದೆ, ಆಗ ಕೇವಲ ೪ ಜನ ಇದ್ದರು, ಆದರೆ ಈಗ ನೂರು ಜನ ಇದ್ದರು ಸಹ ಅವರ ಸೇವೆ, ಹೋರಾಟ ಮಾಡಲಾಗುತ್ತಿಲ್ಲ ಎಂಬ ನೋವಿದೆ ಎಂದು ಹೇಳಿ ಹಿರಿಯ ಪತ್ರಕರ್ತರ ಸೇವೆಯನ್ನು ಸ್ಮರಿಸಿದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳ ಬಗ್ಗೆ ಗಂಭೀರ ಚಿಂತನೆ ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನಿಪ ಅಧ್ಯಕ್ಷ ಆನಂದ ಧಲಬಂಜನ್ ಅವರು ಮಾತನಾಡಿ ಪತ್ರಕರ್ತರು ಕ್ರಿಯಾಶೀಲರಾಗಿ ಸುದ್ದಿಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿ ಅದನ್ನು ಸಮಾಜಕ್ಕೆ ನೀಡಬೇಕು, ಇಂದಿನ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಬದಲಾವಣೆ ಅದಕ್ಕೆ ಹೊಂದಿಕೊಂಡು ನೈಜ ಮತ್ತು ವಸ್ತುನಿಷ್ಠ ವರದಿಗಾರಿಕೆಗೆ ಮುಂದಾಗಬೇಕೆಂದರು.

ಸಾನಿಧ್ಯ ವಹಿಸಿದ್ದ ಜಮಖಂಡಿ ಓಲೇಮಠದ ಶ್ರೀ ಮನಿಪ್ರ ಡಾ. ಅಭಿನವಕುಮಾರ ಚನ್ನಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಸಮಾಜದ ಬೆಳವಣಿಗೆಯಲ್ಲಿ, ಜನತೆಯ ಜ್ವಲಂತ ಸಮಸ್ಯೆಗಳಿಗೆ, ಕಷ್ಟಕಾರ್ಪಣ್ಯಗಳ ಪರಿಹಾರ ಕಂಡುಕೊಳ್ಳುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ ಪತ್ರಿಕೆಗಳಿಗೆ ನೆರವಾಗಿವೆ ಎಂದು ಹೇಳಿ ಸಮಾಜ ಹಾಗೂ ನಾಡಿಗೆ ಪತ್ರಕರ್ತರ ಹಾಗೂ ಪತ್ರಿಕಾ ರಂಗದ ಸೇವೆ ಅನನ್ಯವಾಗಿದೆ ಎಂದರು.

ಸಮಾರಂಭದಲ್ಲಿ ದಿ. ಶರಣಬಸವರಾಜ ಜಿಗಜಿನ್ನಿ ಅವರ ಸ್ಮರಣಾರ್ಥ ಕೊಡಮಾಡುವ ಹಿರಿಯ ಪತ್ರಕರ್ತರ ಪ್ರಶಸ್ತಿಯನ್ನು ಬಾಗಲಕೋಟೆಯ ಈಶ್ವರ ಶೆಟ್ಟರ ಅವರಿಗೆ ಹಾಗೂ ದಿ. ಶ್ರೀಶೈಲ ಅಂಗಡಿ ಅವರ ಸ್ಮರಣಾರ್ಥವಾಗಿ ಕೊಡಮಾಡುವ ಗ್ರಾಮೀಣ ಪತ್ರಕರ್ತರ ಪ್ರಶಸ್ತಿಯನ್ನು ಮಹಾಲಿಂಗಪೂರದ ಮಹೇಶ ಮನ್ನಯ್ಯನವರಮಠ ಅವರಿಗೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶೆÂ್ರÃಯಾ ಪ್ರಾಣೇಶ ಪಾಟೀಲ, ಆಸೀಫ್ ಎಂ. ನದಾಫ, ಎಸ್ಸೆಸ್ಸೆಲ್ಸಿಯ ಶಿವು ವೀರಭದ್ರಯ್ಯ ಹಿರೇಮಠ, ಪ್ರಜ್ವಲ ವಿಠ್ಠಲ ಬಾಗೇವಾಡಿ, ಸೌಮ್ಯಾ ಉಮೇಶ ಭಿಕ್ಷಾವತಿಮಠ, ಕೀರ್ತಿ ಭೀಮಪ್ಪ ತಳವಾರ, ಅನುಷಾ ಕಿರಣ ಬಾಳಾಗೋಳ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರಾದ ಬಸಪ್ಪ ಪಾಣಿಶೆಟ್ಟರ, ರಾಜು ಕುಂದರಗಿ, ಮುತ್ತಣ್ಣ ಪಡಸಲಕರ ಅವರನ್ನು ಸನ್ಮಾನಿಸಿ ಼ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಣ್ಣು ಬೆಳೆಗಾರರ ಸಂಘದ ಉಪಾಧ್ಯಕ್ಷ ಎಸ್.ಬಿ. ಅಂಗಡಿ, ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಟಿ. ಪಾಟೀಲ, ಕರ‍್ಯದರ್ಶಿ ವಿ.ಜಿ. ದೇಶಪಾಂಡೆ, ಹಿರಿಯ ಪತ್ರಕರ್ತರಾದ ರಾಮ ಮನಗೂಳಿ, ಸುಭಾಸ ಹೊದ್ಲೂರ, ರಾಜ್ಯ ಕಾನಿಪ ಸದಸ್ಯ ಮಹೇಶ ಅಂಗಡಿ, ಚಂದ್ರಶೇಖರ ಜಿಗಜಿನ್ನಿ, ಆನಂದ ಜಿಗಜಿನ್ನಿ, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಪತ್ರಕರ್ತರು, ಹಣ್ಣು ಬೆಳಗಾರರ ಸಂಘ, ಜಿಲ್ಲಾ ಕಾನಿಪ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿ – ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯರ ಸ್ವಾಗತದೊಂದಿಗೆ ಆರಂಭವಾದ ಕಾರ‍್ಯಕ್ರಮದಲ್ಲಿ ಜಿಲ್ಲಾ ಕಾನಿಪ ಪ್ರಧಾನ ಕಾರ‍್ಯದರ್ಶಿ ಶಂಕರ ಎಸ್. ಕಲ್ಯಾಣಿ ಸ್ವಾಗತಿಸಿದರು. ದ.ರಾ. ಪುರೋಹಿತ ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಿಕೆ ಉಗಮದಿಂದ ಈವರೆಗಿನ ಬೆಳವಣಿಗೆ, ಪತ್ರಿಕಾ ದಿನಾಚರಣೆಯ ಕುರಿತು ವಿವರಿಸಿದರು. ಪ್ರಕಾಶ ಬಾಳಕ್ಕನವರ ನಿರೂಪಿಸಿದ ಕಾರ‍್ಯಕ್ರಮವನ್ನು ಮೆಹಬೂಬ ನದಾಫ ವಂದಿಸಿದರು.