ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಸಾಗಲಿ
ನಿಮ್ಮ ಸುದ್ದಿ ಅಮೀನಗಡ
ಹಬ್ಬಗಳಿಗೆ ಸಂಬಂಧಿಸಿದಂತೆ ನಮ್ಮ ಪೂರ್ವಜರು ವಿಶೇಷ ಸಂಪ್ರದಾಯಗಳನ್ನು ಹಾಕಿಕೊಟ್ಟಿದ್ದು ಅವುಗಳನ್ನು ಇಂದಿನ ಯುವ ಪೀಳಿಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಜಿಲ್ಲೆಯ ಅಮೀನಗಡ ಪಟ್ಟಣದ ಪಪಂ ಸದಸ್ಯ ವಿಜಯಕುಮಾರ ಕನ್ನೂರ ಹೇಳಿದರು.
ಪಟ್ಟಣದ ಶಾಖಾಂಬರಿ ತರುಣ ಸಂಘದಿಂದ ಹೋಳಿ ಉತ್ಸವದ ಅಂಗವಾಗಿ ಹಲಗೆ ಮೇಳ ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಪ್ರದೇಶದಲ್ಲಿ ಯುಗಾದಿ ನಿಮಿತ್ತ ಬಣ್ಣದಾಟವಿರುತ್ತದೆ. ಆದರೆ ಇಲ್ಲಿ ಆಚರಿಸುವ ಹೋಳಿ ಸಂಪ್ರದಾಯ ಎಲ್ಲೂ ಕಾಣ ಸಿಗುವುದಿಲ್ಲ. ಹೋಳಿ ಹುಣ್ಣಿಮೆ ಮರುದಿನ ಇಲ್ಲಿನ ಸೋಗು ಎಲ್ಲರ ಗಮನ ಸೆಳೆದಿದೆ ಎಂದರು.
ಹಲಗೆ ಹಾಗೂ ಅದರ ನೀನಾದ ಮರೆಯಾಗುತ್ತಿರುವ ಇಂದಿನ ಯುಗದಲ್ಲಿ ಶಾಖಾಂಬರಿ ತರುಣ ಸಂಘ ಹಲಗೆ ಮೇಳಕ್ಕೆ ಮೊದಲ ಬಾರಿಗೆ ವೇದಿಕೆ ಕಲ್ಪಿಸಿದ್ದು ಸಂಸ್ಕೃತಿ, ಪರಂಪರೆ ಉಳಿವಿಗೆ ಹೊಸ ಇಂಬು ನೀಡಿದಂತಾಗಿದೆ. ಹಿರಿಯರು ಹಾಕಿಕೊಟ್ಟ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಶಾಖಾಂಬರಿ ತರುಣ ಸಂಘದ ಎಂ.ಎಸ್.ಹಳ್ಳದ ಮಾತನಾಡಿ, ಪಟ್ಟಣದಲ್ಲಿ ಹೋಳಿ ಸಂಪ್ರದಾಯವನ್ನು ೫೦ ವರ್ಷದಿಂದ ನಿರಂತರವಾಗಿ ಆಚರಿಸಿಕೊಂಡು ಬಂದಿದೆ. ನಮ್ಮಲ್ಲಿ ಬೆಳೆದು ಬಂದಿರುವ ಸಂಸ್ಕೃತಿ ಅಳಿಯಬಾರದು. ಮುಂದುವರೆಸಿಕೊಂಡು ಹೋಗುವುದು ಯುವಕರ ಕರ್ತವ್ಯವಾಗಿದೆ. ಪ್ರತಿ ಹಬ್ಬಕ್ಕೂ ಒಂದು ವಿಶೇಷ ಅರ್ಥವಿರುತ್ತದೆ. ಅವುಗಳನ್ನೆಲ್ಲ ಅದ್ದೂರಿಯಿಂದ ಆಚರಿಸುವಂತಾಗಬೇಕು. ಇಂತಹ ಸಂಸ್ಕೃತಿ ಬೆಳೆಸುವಲ್ಲಿ ಸರಕಾರವೂ ಸಾಕಷ್ಟು ಕಾರ್ಯಕ್ರಮ ಹಾಕಿಕೊಳ್ಳುತ್ತಿದೆ ಎಂದು ಹೇಳಿದರು.
ಪಪಂ ಸದಸ್ಯ ಸಂತೋಷ ಐಹೊಳ್ಳಿ, ಸಂತೋಷ ಕಂಗಳ, ಎಸ್.ಐ.ಮುಳ್ಳೂರ, ಈರಣ್ಣ ನಿಡಗುಂದಿ (ಬಡ್ಡೂರಿ), ನಿಂಗರಾಜ ರಾಮವಾಡಗಿ, ಶಿವು ಸಣಕಲ್ ಇತರರು ಇದ್ದರು