This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Local NewsNational NewsState News

2023 ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ ರಾಷ್ಟ್ರಧ್ವಜ ತಯಾರಿಕೆಯ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ

<span class=2023 ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ ರಾಷ್ಟ್ರಧ್ವಜ ತಯಾರಿಕೆಯ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ " title="2023 ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ ರಾಷ್ಟ್ರಧ್ವಜ ತಯಾರಿಕೆಯ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ " decoding="async" srcset="https://nimmasuddi.com/whirtaxi/2023/09/Screenshot_20230926-211232_Chrome.jpg?v=1695745537 977w, https://nimmasuddi.com/whirtaxi/2023/09/Screenshot_20230926-211232_Chrome-300x181.jpg?v=1695745537 300w, https://nimmasuddi.com/whirtaxi/2023/09/Screenshot_20230926-211232_Chrome-768x464.jpg?v=1695745537 768w" sizes="(max-width: 977px) 100vw, 977px" />

*ರಾಷ್ಟ್ರಧ್ವಜ ತಯಾರಿಕೆಯ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ 2023 ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ*

ಬೆಂಗಳೂರು

ರಾಷ್ಟ್ರಧ್ವಜಕ್ಕೆ ಬೇಕಾಗುವ ಬಟ್ಟೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ದೇಶದ ಮೊದಲ ಖಾದಿ ಗ್ರಾಮೋದ್ಯೋಗ ಸಂಸ್ಥೆ ಎಂಬ ಹಿರಿಮೆ ಹೊಂದಿರುವ ಧಾರವಾಡ ಜಿಲ್ಲೆಯ ಗರಗ ಕ್ಷೇತ್ರೀಯ ಸೇವಾ ಸಂಘವು 2023 ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಭಾಜನವಾಗಿದೆ.

ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ತೀರ್ಮಾನವನ್ನು ಅಂಗೀಕರಿಸಿ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನ ಅಕ್ಟೋಬರ್ 2 ರಂದು ಸಂಜೆ 4.30 ಕ್ಕೆ ನಗರದ ಭಗವಾನ್ ಮಹಾವೀರ(ಇನ್‌ಫೆಂಟ್ರಿ) ರಸ್ತೆಯ ವಾರ್ತಾ ಸೌಧದ ಸುಲೋಚನ ಸಭಾಂಗಣದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ಐದು ಲಕ್ಷ ರೂಪಾಯಿ ನಗದು ಒಳಗೊಂಡ ರಾಜ್ಯ ಸರ್ಕಾರದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿರುವರು, ಶಾಸಕ ರಿಜ್ವಾನ್ ಅರ್ಷದ್ ಸಮಾರಂಭದ ಅಧ್ಯಕ್ಷತೆ ವಹಿಸುವರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಯವರೂ ಆಗಿರುವ ಮುಖ್ಯಮಂತ್ರಿಯವರ ಕಾರ್ಯದರ್ಶಿ ಎನ್.ಜಯರಾಮ್ ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

*ಗರಗ ಕ್ಷೇತ್ರೀಯ ಸೇವಾ ಸಂಘ, ಧಾರವಾಡ*

ಧಾರವಾಡದಿಂದ 17 ಕಿ.ಮಿ.ದೂರದ ಗರಗ ಗ್ರಾಮಮದಲ್ಲಿರುವ ಗರಗ ಕ್ಷೇತ್ರೀಯ ಸೇವಾ ಸಂಘ ಹಲವು ದಶಕಗಳಿಂದ ಖಾದಿ ಉತ್ಪನ್ನ ಮತ್ತು ಖಾದಿ ಮಾರಾಟ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇತ್ತೀಚೆಗೆ ಸಂಪೂರ್ಣ ರಾಷ್ಟ್ರಧ್ವಜ ತಯಾರಿಸುವ ಪರವಾನಿಗೆಯನ್ನು ಕೂಡ ಪಡೆದಿದೆ.

ಇದುವರೆಗೆ ಖಾದಿ ಗ್ರಾಮೋದ್ಯೋಗ ಆಯೋಗದ ಪ್ರಮಾಣಿತ ಗರಗ ಕೇಂದ್ರದಲ್ಲಿ ತಿರಂಗಾಕ್ಕೆ ಬಟ್ಟೆ ತಯಾರು ಮಾಡಿ ಬಣ್ಣಕ್ಕಾಗಿ ಮುಂಬೈಯ ಖಾದಿ ಡೈಯರ್‌ ಆಂಡ್‌ ಪ್ರಿಂಟರ್‌ಗೆ ಕಳುಹಿಸಿ, ಅಲ್ಲಿಂದ ವರ್ಣಮಯಗೊಂಡು ಸಿದ್ಧವಾಗುತ್ತಿದ್ದ ರಾಷ್ಟ್ರಧ್ವಜಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. 2023 ರ ಜೂನ್‌ 3 ರಂದು ಬ್ಯೂರೋ ಆಫ್‌ ಇಂಡಿಯನ್‌ ಸ್ಟಾಂಡರ್ಡ್ಸ್‌ (ಬಿಐಎಸ್) 2:3 ಅಡಿ ತ್ರಿವರ್ಣ ಧ್ವಜ ತಯಾರಿಕೆಗೆ ಅನುಮತಿ ನೀಡಿದೆ. ಇದರಿಂದಾಗಿ ಗರಗ ಕೇಂದ್ರದಲ್ಲಿಯೇ ನೂಲುವುದು, ನೇಯುವುದು, ಬಟ್ಟೆ ತಯಾರಿಕೆ ಜೊತೆಗೆ ಬಣ್ಣಗಳ ಮುದ್ರಣ ಮಾಡುವ ಕಾರ್ಯದೊಂದಿಗೆ ಸಂಪೂರ್ಣ ತಿರಂಗಾ ಧ್ವಜ ಇಲ್ಲಿಯೇ ರೂಪುಗೊಳ್ಳಲಿದೆ.

1956 ರಲ್ಲಿ ಧಾರವಾಡ ತಾಲೂಕು ಸೇವಾ ಸಂಘವೆಂದು ಆರಂಭವಾಗಿ ನಿರಂತರವಾಗಿ ಖಾದಿ ಉತ್ಪನ್ನ ಮತ್ತು ಖಾದಿ ಮಾರಾಟವನ್ನು ಮಾಡುತ್ತಾ ಬರಲಾಗಿದೆ. 1989-90 ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದವರ ಆದೇಶದಂತೆ ಮಾತೃ ಸಂಘವನ್ನು ನಾಲ್ಕು ಸಣ್ಣ ಸಂಸ್ಥೆಗಳಾಗಿ ವಿಕೇಂದ್ರೀಕರಿಸಲಾಯಿತು. ಅದರಂತೆ ಮಾತೃಸಂಸ್ಥೆ ಧಾರವಾಡ ತಾಲೂಕು ಸೇವಾ ಸಂಘ, ಗರಗ ಕ್ಷೇತ್ರಿಯ ಸೇವಾ ಸಂಘ, ಹೆಬ್ಬಳ್ಳಿ ಕ್ಷೇತ್ರೀಯ ಸೇವಾ ಸಂಘ ಮತ್ತು ಅಮ್ಮಿನಬಾವಿ ಕ್ಷೇತ್ರೀಯ ಸೇವಾ ಸಂಘವೆಂದು ನಾಮಕರಣಗೊಳಿಸಲಾಯಿತು.

ರಾಷ್ಟ್ರಧ್ವಜವನ್ನು ಧಾರವಾಡ ಜಿಲ್ಲೆಯ ಗರಗ, ಹೆಬ್ಬಳ್ಳಿ, ಬೆಂಗೇರಿ ಗ್ರಾಮಗಳಲ್ಲಿ ತಯಾರಿಸಲಾಗುತ್ತದೆ. ರಾಷ್ಟ್ರಧ್ವಜಕ್ಕೆ ಬೇಕಾಗುವ ಖಾದಿ ಬಟ್ಟೆಯನ್ನು ತಯಾರಿಸುವ ಭಾರತದ ಪ್ರಪ್ರಥಮ ಖಾದಿ ಗ್ರಾಮೋದ್ಯೋಗ ಘಟಕ ಇರುವ ಗ್ರಾಮ ಗರಗ. ಉತ್ತರ ಕರ್ನಾಟಕದಾದ್ಯಂತ ಒಟ್ಟು ೫೨ ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ.

ಗರಗ ಕ್ಷೇತ್ರೀಯ ಸೇವಾ ಸಂಘವು ಆರಂಭದಲ್ಲಿ ಗರಗದಲ್ಲಿ ವಿಶೇಷವಾಗಿ 45ʼʼ, 36ʼʼ ಖಾದಿ ಮತ್ತು ಕೋಟಿಂಗ್‌ ಹನಿಕೂಂಬ್‌ ಟವೆಲ್‌ಗಳನ್ನು ಮಾಡುತ್ತಾ ತನ್ನ ವ್ಯಾಪ್ತಿಯನ್ನು ತಡಕೋಡ, ಖಾನಾಪುರ, ತೇಗೂರ, ಕೋಟೂರ, ಗುಳದಕೊಪ್ಪ, ಮಾದನಬಾವಿ, ಮುಗಳಿ ಮತ್ತು ಮಮ್ಮಿಗಟ್ಟಿ ಊರುಗಳಿಗೆ ವಿಸ್ತರಿಸಿದೆ. ಬಳಿಕ ಖಾದಿ ಆಯೋಗದ ಸಲಹೆಯಂತೆ ಗರಗ ಕ್ಷೇತ್ರೀಯ ಸಂಘ ರಾಷ್ಟ್ರಧ್ವಜಕ್ಕೆ ಬೇಕಾಗುವ ಖಾದಿ ಬಟ್ಟೆ ತಯಾರಿಸುವ ಕಾರ್ಯ ನಡೆಸುತ್ತಾ ಬಂದಿದೆ. 1975 ರಿಂದ ರಾಷ್ಟ್ರಧ್ವಜದ ಬಟ್ಟೆ ನೇಯ್ಗೆಯ ಕೆಲಸವನ್ನು ಮಾಡುತ್ತಾ ಬಂದಿದೆ.

ಸಂವಿಧಾನದ ಮಾರ್ಗಸೂಚಿ ಪ್ರಕಾರ ರಾಷ್ಟ್ರಧ್ವಜದ ಬಟ್ಟೆ ಕೈಮಗ್ಗದಿಂದ ನೇಯ್ದ ಬಟ್ಟೆಯೇ ಆಗಬೇಕು. ಕೈಗಳಿಂದ ಅಂದರೆ ಅಂಬರ ಚರಕಾದಲ್ಲಿ ತೆಗೆದ ನೂಲಿನಿಂದ ಬಟ್ಟೆ ತಯಾರಿಸುವುದು ಸವಾಲಿನ ಕೆಲಸ. ಧ್ವಜದ ಬಟ್ಟೆ ಅಂದರೆ ಬರಿ ಕಣ್ಣಿಗೆ ಕಾಣುವ ಸಾಧಾರಣ ಬಟ್ಟೆಯಾಗದೆ ಭಾರತೀಯ ಮಾನಕ ಬ್ಯೂರೋದ ಮಾನದಂಡ ಪ್ರಕಾರ ತಯಾರಿಸಬೇಕಾಗುತ್ತದೆ. ಐ.ಎಸ್.ಐ ಸರ್ಟಿಫಿಕೇಟ್‌ ಪಡೆದ ರಾಷ್ಟ್ರಧ್ವಜದ ಖಾದಿ ಬಟ್ಟೆಯ ಒಂದು ಡೆಸಿ ಮೀಟರ್‌ನಲ್ಲಿ 175 ಹಾಸು ಎಳೆ ಹಾಗೂ 165 ಹೊಕ್ಕು ಎಳೆ ಇರಬೇಕು. 50:200 ಮಿ.ಮೀ ಗಾತ್ರದ ಈ ಬಟ್ಟೆ ಹಾಸುಬದಿಯಲ್ಲಿ 40 ಕಿಲೋ ತೂಕವನ್ನು, ಹೊಕ್ಕು ಬದಿಯಲ್ಲಿ 30ಕಿ.ಗ್ರಾಂ ತೂಕವನ್ನು ತಾಳಿಕೊಳ್ಳಬೇಕು. ಒಂದು ಚದರ ಮೀಟರ್‌ ಈ ಬಟ್ಟೆ 205 ಗ್ರಾಂ ತೂಕವಿರಬೇಕು ಎಂದು ನಿಯಮಾವಳಿ ರೂಪಿಸಲಾಗಿದೆ. ಬ್ಯೂರೋದ ಮಾನದಂಡಗಳಿಗೆ ತಕ್ಕಂತೆ ಇಲ್ಲದಿದ್ದರೆ ಅವುಗಳನ್ನು ತಿರಸ್ಕರಿಸಲಾಗುತ್ತದೆ.

ಈ ಪ್ರಕಾರ ಸಂಸ್ಥೆಯು ನೇಯ್ಗೆಯಲ್ಲಿ ಐಎಸ್‌ಐ ಮಾರ್ಕಿನ ಬಟ್ಟೆಯನ್ನು ತಯಾರಿಸಿ 2003 ನೇ ಸಾಲಿನವರೆಗೆ ಮುಂಬಯಿ ಖಾದಿ ಗ್ರಾಮೋದ್ಯೋಗ ಸಂಘ ಬೊರಿವಿಲಿ ಇವರಿಗೆ ಪೂರೈಸುತ್ತಾ ಬಂದಿದೆ. ಆದರೆ 2003-04 ರಿಂದ ಮುಂಬಯಿ ಖಾದಿ ಗ್ರಾಮೋದ್ಯೋಗ ಸಂಘ ಬೊರಿವಿಲಿ ಇವರು ರಾಷ್ಟ್ರಧ್ವಜ ತಯಾರಿಸುವುದನ್ನು ನಿಲ್ಲಿಸಿದ್ದರಿಂದ, ಗರಗ ಕ್ಷೇತ್ರೀಯ ಸೇವಾ ಸಂಘದ ವತಿಯಿಂದಲೇ ಪೂರ್ಣ ಪ್ರಮಾಣದಲ್ಲಿ ರಾಷ್ಟ್ರಧ್ವಜ ನಿರ್ಮಾಣ ಕಾರ್ಯವನ್ನು ಆರಂಭಿಸಲಾಯಿತು.ಸಂಸ್ಥೆಯ ಖಾದಿ ಕೇಂದ್ರದ ವ್ಯವಸ್ಥಾಪಕ ಶಂಕರ ಎಮ್.ಕರಡಿಗುಡ್ಡ ಅವರ ಪ್ರಯತ್ನದ ಫಲವಾಗಿ ಸಂಸ್ಥೆಯು ಸದೃಢವಾಗಿ ಬೆಳೆಯಲು ಸಾಧ್ಯವಾಗಿದೆ.

ಪ್ರಸ್ತುತ 10 ಹಳ್ಳಿಗಳಲ್ಲಿ ಈ ಘಟಕದ ನೂಲುವ ಕೇಂದ್ರಗಳಿದ್ದು, ನೇಯುವ ಕೇಂದ್ರಗಳಿರುವುದು ಗರಗ ಮತ್ತು ತಡಕೋಡದಲ್ಲಿ ಮಾತ್ರ. ಗರಗದಲ್ಲಿ 70 ಮಗ್ಗದ ಜೊತೆ 75 ಚರಕಗಳಿದ್ದರೆ ತಡಕೋಡದಲ್ಲಿ 30 ಮಗ್ಗಗಳ ಜೊತೆ 60 ಚರಕಗಳಿವೆ.

ಹಲವು ಸವಾಲುಗಳ ನಡುವೆಯೂ ದೇಶದ ಎಲ್ಲಾ ರಾಜ್ಯಗಳಿಗೆ ಐಎಸ್‌ಐ ಗುರುತಿನ ಧ್ವಜಗಳನ್ನು ಸಂಸ್ಥೆಯ ಮೂಲಕ ಪೂರೈಕೆ ಮಾಡಲಾಗುತ್ತಿದ್ದು, ಸಂಸ್ಥೆಯಲ್ಲಿ ಸಧ್ಯಕ್ಕೆ 250 ನೂಲುವ ಮಾತೆಯರು, 50 ಜನ ನೇಕಾರರು ಅಲ್ಲದೆ 15 ಜನ ಖಾಯಂ ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಿದ್ದಾರೆ.

ರಾಷ್ಟ್ರಧ್ವಜ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ 2023 ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ,ಐದು ಲಕ್ಷ ನಗದು ಪುರಸ್ಕಾರದೊಂದಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.