ಬಳ್ಳಾರಿ : ನಮ್ಮ ಭಾರತವೊಂದೇ 1,000 ವಿಮಾನಗಳ ಆರ್ಡರ್ ಕೊಟ್ಟಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದು, ಬಳ್ಳಾರಿಯಲ್ಲಿ ವಿಧಾನ ಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರ ದ ಅಭ್ಯರ್ಥಿ ಪರ ಮತದಾರರ ಸಮಾವೇಶದಲ್ಲಿ ಜೋಶಿ ಮಾತನಾಡುತ್ತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ಕಾಂಗ್ರೆಸ್ ಆಡಳಿತದ 60 ವರ್ಷಗಳಲ್ಲಿ ಭ್ರಷ್ಟ ರಾಜಕಾರಣದಿಂದಾಗಿ ಭಾರತ ಜಗತ್ತಿನ 5 ಅತ್ಯಂತ ದುರ್ಬಲ ರಾಷ್ಟ್ರಗಳಲ್ಲಿ ಒಂದಾಗಿತ್ತು. ಆದರೆ, 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಈಗ 2024ರ ಹೊತ್ತಿಗೆ ಭಾರತವನ್ನು ಜಗತ್ತಿನ 5ನೇ ಅತ್ಯಂತ ಆರ್ಥಿಕ ಪ್ರಬಲ ರಾಷ್ಟ್ರವನ್ನಾಗಿಸಿದ್ದಾರೆ ಎಂದು ಜೋಶಿ ಹೇಳಿದರು.
ನಮ್ಮ ದೇಶ ಕಾಂಗ್ರೆಸ್ ಆಡಳಿತದ ಅವಧಿ ಯಲ್ಲಿ ಅಮೆರಿಕ, ಇಂಗ್ಲೆಂಡ್ ಹೇಳಿದ್ದಕ್ಕೆಲ್ಲಾ ತಲೆಯಾಡಿಸುವ ಕೋಲೆಬಸವನಂತಾಗಿತ್ತು. ಪ್ರಧಾನಿ ಮೋದಿಯವರ ಆಡಳಿತ ದಿಂದ ಈ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇಡೀ ಜಗತ್ತೇ ಭಾರತವನ್ನು ಗೌರವಿಸುವಂತೆ ಅವರು ಮಾರ್ಪಾಡು ಮಾಡಿದ್ದಾರೆ ಎಂದು ಜೋಶಿ ಬಣ್ಣಿಸಿದರು.
ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಕಳೆದು ಹೋಗುತ್ತಿದೆ. ತನ್ನ ಸ್ಥಾನಗಳನ್ನೆಲ್ಲ ಕಳೆದುಕೊಳ್ಳುತ್ತಿದೆ. ಅಧಿಕೃತ ವಿರೋಧ ಪಕ್ಷವಾಗುವತ್ತ ವಾಲುತ್ತಿದೆ. ಕಾಂಗ್ರೆಸ್ ಆಡಳಿತದ ಎಲ್ಲ ರಾಜ್ಯಗಳಲ್ಲಿ ಅಪರಾಧಗಳ ಸಂಖ್ಯೆ ಮಿತಿ ಮೀರಿದೆ. ಕರ್ನಾಟಕದಲ್ಲೇ ಕಳೆದ ಕೆಲ ತಿಂಗಳುಗಳಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳು ಘಟಿಸಿವೆ ಎಂದು ಸಚಿವ ಜೋಶಿ ಕಳವಳ ವ್ಯಕ್ತಪಡಿಸಿದರು.
” ದೇಶದಲ್ಲಿ ವಿಮಾನ ನಿಲ್ದಾಣಗಳನ್ನು ಹೆಚ್ಚಿಸಲಾಗಿದೆ. ಅಂತೆಯೇ ಭಾರತೀಯರಿಗೆ ಹೆಚ್ಚಿನ ಸೌಲಭ್ಯಗಳನ್ನೂ ಕಲ್ಪಿಸಲಾಗಿದ್ದು, ನಾಡಿನ ಏಳಿಗೆಗೆ ಬಿಜೆಪಿ ನಾಯಕತ್ವ ಅಗತ್ಯ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಇಂದು ಅತ್ಯಂತ ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆ. ನಾಡಿನ ಏಳಿಗೆಗೆ ಬಿಜೆಪಿ ನಾಯಕತ್ವ ಅಗತ್ಯವಾಗಿದೆ” ಎಂದು ಜೋಶಿ ಪ್ರತಿಪಾದಿಸಿದರು.