This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

State News

ರಾಜ್ಯವ್ಯಾಪಿ ಬಂದ್ ಗೆ ಮೈಸೂರು ಸಂಘ ಸಂಸ್ಥೆಗಳ ಬೆಂಬಲ

ರಾಜ್ಯವ್ಯಾಪಿ ಬಂದ್ ಗೆ ಮೈಸೂರು ಸಂಘ ಸಂಸ್ಥೆಗಳ ಬೆಂಬಲ

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಸೆ.29ರಂದು ನಡೆಯಲಿರುವ ಕರ್ನಾಟಕ ಬಂದ್‌ಗೆ ಮೈಸೂರಿನಲ್ಲೂವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೇವರಾಜ ಅರಸು ರಸ್ತೆಯಲ್ಲಿರುವ ಪ್ರತಿಯೊಂದು ಅಂಗಡಿ, ರಸ್ತೆ ಬದಿ ವ್ಯಾಪಾರಿಗಳು ಮತ್ತು ಪಾದಚಾರಿಗಳಿಗೆ ಗುರುವಾರ ಗುಲಾಬಿ ಹೂ ನೀಡಿ ವಿಷ್ಣು ಸೇನಾ ಸಮಿತಿ ವತಿಯಿಂದ ಶುಕ್ರವಾರದ ಬಂದ್‌ ಬೆಂಬಲಿಸುವಂತೆ ಮನವಿ ಮಾಡಲಾಯಿತು.

ರೈತ ಸಂಘ, ವಿವಿಧ ಕನ್ನಡಪರ ಸಂಘಟನೆಗಳು, ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಸ್ಥೆ, ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟ, ಹೋಟೆಲ್‌ ಮಾಲೀಕರ ಸಂಘ ಬಂದ್‌ಗೆ ಬೆಂಬಲ ಸೂಚಿಸಿವೆ. ಇದಲ್ಲದೆ, ಕಾವೇರಿ ಕ್ರಿಯಾ ಸಮಿತಿ, ಮೈಸೂರು ಟಾಂಗಾವಾಲಗಳ ಸಂಘ, ಹಿಂದುಸ್ಥಾನ ಜನತಾ ಪಾರ್ಟಿ, ಜಯಕರ್ನಾಟಕ, ಕರ್ನಾಟಕ ರಾಜ್ಯ ರೈತ ಸಂಘ, ಖಾಸಗಿ ಬಸ್‌ ಮಾಲೀಕ ಮತ್ತು ಚಾಲಕರ ಸಂಘ, ಕರ್ನಾಟಕ ತಮಿಳು ಸಂಘಟನೆಗಳ ಒಕ್ಕೂಟ, ವಾಣಿಯರ್‌ ಸಂಘಂ (ತಮಿಳು ಗಾಣಿಗರು) ಸಂಘಟನೆ ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು ಬೆಂಬಲ ಸೂಚಿಸಿವೆ.

ಮೈಸೂರು ಜಿಲ್ಲಾ ಹೋಟೆಲ್‌ ಮಾಲೀಕರ ಸಂಘವು ಬಂದ್‌ಗೆ ಬೆಂಬಲ ಸೂಚಿಸಿದ್ದು, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹೋಟೆಲ್‌ಗಳನ್ನು ಮುಚ್ಚಿ ಸಂಪೂರ್ಣ ಬೆಂಬಲ ನೀಡಲು ಸಂಘ ತೀರ್ಮಾನಿಸಿದೆ. ಹೋಟೆಲ್‌, ರೆಸ್ಟೋರೆಂಟ್‌, ಬೇಕರಿಗಳು, ಸ್ವೀಟ್‌ ಶಾಪ್‌ಗಳು, ಫಾಸ್ಟ್‌ಫುಡ್‌ ಮತ್ತು ಐಷಾರಾಮಿ ಹೋಟೆಲ್‌ಗಳು ಸೇರಿದಂತೆ ಎಲ್ಲರೀತಿಯ ಆತಿಥ್ಯ ನೀಡುವ ವ್ಯಾಪಾರಿಗಳು ಶುಕ್ರವಾರ ಬಂದ್‌ ಮಾಡುವಂತೆ ಘೋಷಿಸಲಾಗಿದೆ. ಬೆಳಗ್ಗೆ 9.30ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜಿಲ್ಲಾಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಸಾಗಿ ಮನವಿ ಸಲ್ಲಿಸಲಿದ್ದೇವೆ ಎಂದು ಜಿಲ್ಲಾಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ತಿಳಿಸಿದ್ದಾರೆ.

ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟಗಳ ಬೆಂಬಲ

ಮೈಸೂರು ಸಂಘ- ಸಂಸ್ಥೆಗಳ ಒಕ್ಕೂಟವು ಬೆಂಬಲ ಸೂಚಿಸಿದೆ. ಹೋಟೆಲ್‌ಗಳು, ದೇವರಾಜ ಅರಸು ರಸ್ತೆಯಲ್ಲಿನ ಅಂಗಡಿ-ಮುಂಗಟ್ಟುಗಳು, ಟ್ರಾವೆಲ್ಸ್‌ ವಾಹನಗಳು ಸೇರಿದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿದ ಮತ್ಯಾವುದೆ ಸೇವೆಗಳು ಲಭ್ಯವಿರುವುದಿಲ್ಲಎಂದು ಅಧ್ಯಕ್ಷ ಬಿ.ಎಸ್‌.ಪ್ರಶಾಂತ್‌ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ – ಎಪಿಎಂಸಿ ವ್ಯಾಪಾರಿಗಳು

ಕರ್ನಾಟಕ ರಾಜ್ಯ ರೈತ ಸಂಘದ ಬೆಂಬಲ ನೀಡಿದ್ದು, ಮೈಸೂರು-ಬೆಂಗಳೂರು ಹೆದ್ದಾರಿ, ರೈಲು ಮಾರ್ಗ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದೆ. ಇನ್ನು, ರಾಜ್ಯದ ರೈತರನ್ನು ಬೆಂಬಲಿಸಿ ತರಕಾರಿ ಮಾರುಕಟ್ಟೆ ಬಂದ್‌ ಮಾಡಲಾಗುವುದು ಎಂದು ಎಂಪಿಎಂಸಿ ವ್ಯಾಪಾರಿಗಳು ತಿಳಿಸಿದ್ದಾರೆ. ರೈತರು, ದಲ್ಲಾಳಿಗಳು, ವರ್ತಕರು, ಹಮಾಲರು, ಆಟೋ ಚಾಲಕರು ಬಂದ್‌ ಯಶಸ್ವಿಗೊಳಿಸಬೇಕು ಎಂದು ವ್ಯವಸಾಯೋತ್ಪನ್ನ ಮಾರುಕಟ್ಟೆ ಹಣ್ಣು ಮತ್ತು ತರಕಾರಿ ದಲ್ಲಾಳಿಗಳ ಸಂಘ ಹಾಗೂ ಹಣ್ಣು ಮತ್ತು ತರಕಾರಿ ಹಮಾಲರ ಸಂಘ ಮನವಿ ಮಾಡಿದೆ.

ಜಿಲ್ಲೆಯ 30ಕ್ಕೂ ಹೆಚ್ಚು ಆಟೋರಿಕ್ಷಾ ಸಂಘಗಳು ಬಂದ್‌ ಬೆಂಬಲಿಸಿವೆ. ಜತೆಗೆ ಟ್ಯಾಕ್ಸಿ, ಖಾಸಗಿ ಬಸ್‌ ಮಾಲೀಕರು ಮತ್ತು ಚಾಲಕರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ಆಟೋ, ಟ್ಯಾಕ್ಸಿ ಮತ್ತು ಬಸ್‌ಗಳು ರಸ್ತೆಗಿಳಿಯುವುದಿಲ್ಲ.