ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್ ತಡೆಗೆ ಜನತೆಗೆ ಲಸಿಕೆ ನೀಡುವಲ್ಲಿ ಪಟ್ಟಣದಲ್ಲಿ ಜೂ.೯ರಂದು ನಡೆಯಬೇಕಿದ್ದ ಲಸಿಕೆ ಅಭಿಯಾನ ಆರಂಭವಾಗದೆ ಜನತೆ ಹೈರಾಣಾದರು.
೪೫ ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವ ನಿಟ್ಟಿನಲ್ಲಿ ಹುನಗುಂದ ತಹಸೀಲ್ದಾರ್ ಶ್ವೇತಾ ಬಿಡಿಕರ್ ಸೋಮವಾರ ಪಪಂ ಕಚೇರಿಯಲ್ಲಿ ಲಸಿಕೆ ಅಭಿಯಾನ ಹಮ್ಮಿಕೊಳ್ಳುವಂತೆ ಸೂಚಿಸಿದ್ದರು.
ಪಟ್ಟಣದಲ್ಲಿ ೧೬ ವಾರ್ಡ್ಗಳಿದ್ದು ದಿನಕ್ಕೆ ೨ ವಾರ್ಡ್ನಂತೆ ಲಸಿಕೆ ಹಾಕಲು ವ್ಯವಸ್ಥೆ ಮಾಡಿಕೊಳ್ಳಿ. ವಾರದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಹೇಳಿದ್ದರು.
ಅದರಂತೆ ಪಪಂ ಆಡಳಿತ ೪೫ ವರ್ಷ ಮೇಲ್ಪಟ್ಟವರಿಗೆ ೧ನೇ ಡೋಸ್ ಲಸಿಕೆ ಹಾಗೂ ೨ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆಗಾಗಿ ಜೂ.೯ ರಿಂದ ೧೫ರ ವರೆಗೆ ಅಭಿಯಾನ ನಡೆಯಲಿದೆ. ವಾರ್ಡ್ ಸದಸ್ಯರು, ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆ ಹೊರಡಿಸಿತ್ತು.
ಜನರೂ ಸಹ ಲಸಿಕೆ ಪಡೆಯಲು ಉತ್ಸುಕರಾಗಿದ್ದರು. ಆದರೆ ಬುಧವಾರ ಮಧ್ಯಾಹ್ನವಾದರೂ ಯಾವ ವಾರ್ಡ್ನಲ್ಲೂ ಲಸಿಕೆ ಅಭಿಯಾನದ ರೂಪು ಕಂಡು ಬರಲಿಲ್ಲ. ಜನತೆ ಬೆಳಗ್ಗೆಯಿಂದ ಕಾದು ನಂತರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯುತ್ತಿರುವುದು ಕಂಡು ಬಂದಿತು.
ಈ ಕುರಿತು ಪಪಂ ಅಧ್ಯಕ್ಷ ಸಂಗಪ್ಪ ತಳವಾರ ಅವರನ್ನು ವಿಚಾರಿಸಿದಾಗ, ಮುಖ್ಯಾಧಿಕಾರಿ ಅವರು ಸದಸ್ಯರ ವಿಶ್ವಾಸ ತೆಗದುಕೊಳ್ಳದೆ ಲಸಿಕೆ ಅಭಿಯಾನ ದಿನ ಗೊತ್ತುಪಡಿಸಿದ್ದಾರೆ. ಯಾವ ದಿನದಂದು ಯಾವ ವಾರ್ಡ್ನಲ್ಲಿ ಅಭಿಯಾನ ನಡೆಯಬೇಕು ಎಂಬುದೇ ತಿಳಿದಿಲ್ಲ. ಹೀಗಾಗಿ ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಅಭಿಯಾನ ನಡೆಸಿದರೆ ಜನತೆಗೆ ತೊಂದರೆ ಆಗುತ್ತಿದೆ. ಹೀಗಾಗಿ ಮತ್ತೊಂದು ದಿನ ಸರಿಯಾದ ಯೋಜನೆಯೊಂದಿಗೆ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.
*ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಅವರು ದೇವಸ್ಥಾನವೊಂದರಲ್ಲಿ ನಡೆದಿದೆ ಎಂಬ ಮಾಹಿತಿ ನೀಡಿದ್ದರೂ ಅದು ನಡೆದಿಲ್ಲ ಎಂಬುದು ಗಮನಕ್ಕೆ ಬಂದಿದೆ. ಪಪಂ ಸದಸ್ಯರೊಬ್ಬರು ಅಭಿಯಾನ ಮುಂದೂಡುವAತೆ ಹೇಳಿದ್ದು ಸದ್ಯಕ್ಕೆ ಲಸಿಕೆ ಖಾಲಿ ಆಗಿದ್ದು ಲಸಿಕೆ ಬಂದ ತಕ್ಷಣ ಅಭಿಯಾನ ಆರಂಭಿಸಲಾಗುವುದು. ಜತೆಗೆ ಮಾಧ್ಯಮಗಳಿಗೆ ಮುಖ್ಯಾಧಿಕಾರಿ ಸರಿಯಾದ ಮಾಹಿತಿ ನೀಡುತ್ತಿಲ್ಲವೆಂಬುದು ಅರಿತಿದ್ದು ಕಂದಾಯ ನಿರೀಕ್ಷಕರಿಗೆ ಮಾಹಿತಿ ಪಡೆದು ಮಾಧ್ಯಮದವರಿಗೆ ನೀಡಲು ಸೂಚಿಸಲಾಗುವುದು.*
-ಶ್ವೇತಾ ಬಿಡಿಕರ, ತಹಸೀಲ್ದಾರ್, ಹುನಗುಂದ.
ಲಸಿಕೆಗೆ ೧೦೦ ರೂ.?
ಪಟ್ಟಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲಸಿಕೆಗಾಗಿ ತೆರಳಬೇಕೆಂದರೆ ಕೆಲವರು ಅಂದಾಜು ೧೦೦ ರೂ. ನೀಡಬೇಕಾದ ಅನಿವಾರ್ಯತೆ ಬಂದೊದಗಿದೆ. ವಾರ್ಡ್ ೧, ೨, ೩, ೧೪ ಸೇರಿದಂತೆ ಕೆಲ ವಾರ್ಡ್ಗಳ ಜನತೆ ಅದರಲ್ಲೂ ಹಿರಿಯ ಜೀವಿಗಳು ೩ ಕಿಮೀ ದೂರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಲು ಅಟೋ ಚಾರ್ಜ ಎಂದು ೧೦೦ ರೂ. ಖರ್ಚು ಮಾಡುವ ಅನಿವಾರ್ಯತೆ ಬಂದೊದಗಿದ್ದು ಶೀಘ್ರ ಅಂತಹ ವಾರ್ಡ್ಗಳ ಜನರ ಅನುಕೂಲಕ್ಕಾಗಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.