ಪರಿಷತ್ ಚುನಾವಣೆ ಹಿನ್ನೆಲೆ ಪಕ್ಷೇತರ ಅಭ್ಯರ್ಥಿ ಲೋಣಿಯವರಿಂಧ ಬೀಳಗಿಯಲ್ಲಿ ಪ್ರಚಾರಸಭೆ
ನಿಮ್ಮ ಸುದ್ದಿ ಬಾಗಲಕೋಟೆ
ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸುನಿಲಗೌಡ ತಮ್ಮ ಎರಡೂವರೇ ವರ್ಷದ ಎಂಎಲ್ಸಿ ಅಧಿಕಾರವಧಿಯಲ್ಲಿನ ಪೂರ್ಣ ಅನುದಾನವನ್ನು ಕೊರೊನಾ ವೇಳೆ ಗ್ರಾಮ ಪಂಚಾಯಿತಿಗಳ ಸ್ಯಾನಿಟೈಜೆಶನ್ ಗೆ ಬಳಸಿಕೊಂಡಿದ್ದೆ ದೊಡ್ಡ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಇತರೆ ಪ್ರಮುಖ ಸಮಸ್ಯೆಗಳು ನಿಮ್ಮ ಕಣ್ಣಿಗೆ ಕಾಣಿಸಲಿಲ್ಲವೇ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಕಾಂಗ್ರೆಸ್ ಅಭ್ಯರ್ಥಿ ಸುನಿಲಗೌಡ ಪಾಟೀಲ್ ವಿರುದ್ದ ಹರಿಹಾಯ್ದರು.
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿಯವರು ರವಿವಾರ ಬೀಳಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ “ಸ್ವಾಭಿಮಾನಿ ಸದಸ್ಯರ ಸಭೆ” ಯಲ್ಲಿ ಮತಪ್ರಚಾರ ನಡೆಸಿ ಮಾತನಾಡಿದರು. ಪರಿಷತ್ ಚುನಾವಣೆಗೆ ಸ್ಪರ್ಧಿಸುವವರಿಗೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಕಷ್ಟಸುಖಗಳ ಅರಿವು, ಪರಿಷತ್ತಿನ ಬಗ್ಗೆ, ಅದರ ಕಾರ್ಯವ್ಯಾಪ್ತಿ ಹಾಗೂ ಸದಸ್ಯನ ಕರ್ತವ್ಯಗಳ ಕುರಿತು ಕನಿಷ್ಠ ಜ್ಞಾನವಿರಬೇಕು. ಆದರೆ ಕಾಂಗ್ರೆಸ್ ಪಕ್ಷ ಎಂ.ಬಿ.ಪಾಟೀಲರ ಕುಟುಂಬ ರಾಜಕಾರಣ ಪ್ರೇಮ ಹಾಗೂ ಪ್ರಭಾವಕ್ಕೆ ಒಳಗಾಗಿ ಪರಿಷತ್ತಿಗೆ ಅರ್ಹರಲ್ಲದ ಸುನಿಲಗೌಡರಿಗೆ ಟಿಕೇಟ್ ನೀಡಿದೆ. ಹಿರಿಯರು, ಅನುಭವಿಗಳೂ ಆಗಿರುವ ಎಸ್.ಆರ್.ಪಾಟೀಲರಿಗೆ ಟಿಕೇಟ್ ನೀಡದೆ ಕುತಂತ್ರ ರಾಜಕಾರಣಕ್ಕೆ ಮಣಿದಿದೆ.
ಕಾಂಗ್ರೆಸ್ ಪಕ್ಷ ದುಡಿದವರಿಗೆ ಅವಕಾಶ ನೀಡದೇ ದುಡ್ಡಿರುವವರಿಗೆ ಮಣೆ ಹಾಕುತ್ತಿದೆ. ಪಕ್ಷದ ಎರಡನೇ ಹಂತದ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಕಡೆಗಣಿಸುತ್ತಿದೆ. ಈ ಪರಿಷತ್ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಲಿದ್ದಾರೆ ಎಂದರು. ಅಖಂಡ ವಿಜಾಪುರ ಜಿಲ್ಲೆಯ ಜಿ.ಪಂ ಸದಸ್ಯನಾಗಿ, ಉಪಾಧ್ಯಕ್ಷನಾಗಿ ಹಂಗಾಮಿ ಅಧ್ಯಕ್ಷನಾಗಿಯೂ ಸಾಕಷ್ಟು ಜನ ಸೇವಾಕಾರ್ಯಗಳನ್ನು ಮಾಡಿದ್ದೇನೆ. ಸುಮಾರು ಇಪ್ಪತೈದು ವರ್ಷಗಳ ರಾಜಕಾರಣ ಅನುಭವ ಹೊಂದಿದ್ದೇನೆ. ಮೇಲಾಗಿ ರೈತ ಕುಟುಂಬದಿಂದ ಬಂದಿರುವ ನನಗೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆಗಳ ಬಗ್ಗೆ ಅರಿವಿದ್ದು, ಸದಸ್ಯರೊಂದಿಗೆ ಅತ್ಯಂತ ಸಮೀಪದ ಒಡನಾಟ ಹೊಂದಿದ್ದೇನೆ. ಈ ಪರಿಷತ್ತಿನ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ಸ್ಥಳೀಯ ಸಂಸ್ಥೆಗಳ ಸದಸ್ಯರ ಪವಿತ್ರ ಮತದಾನ ಹಕ್ಕನ್ನು ಮೊಟಕುಗೊಳಿಸುವ ಹುನ್ನಾರವನ್ನು ಹುಸಿಗೊಳಿಸಿ ಸದಸ್ಯರ ಸ್ವಾಭಿಮಾನದ ಪ್ರತೀಕವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಮತದಾರರು ನನಗೆ ಪ್ರಥಮ ಪ್ರಾಶಸ್ತ್ಯದ ಮತ ಹಾಕಿ ತಮ್ಮ ಸ್ವಾಭಿಮಾನ ಗೆಲ್ಲಿಸಿಕೊಳ್ಳಬೇಕೆಂದು ಕೋರಿಕೊಂಡರು.
ವೇದಿಕೆಯಲ್ಲಿ ಕೊರ್ತಿ ಗ್ರಾ.ಪಂ ಅಧ್ಯಕ್ಷ ರಾಮಣ್ಣ ಡವಲೇಶ್ವರ, ಸದಸ್ಯರಾದ ಮಹಾಂತೇಶ ಅಂತರಗೊಂಡ, ಹೊಳೆಬಸು ಗಾಣಿಗೇರ, ಅನಗವಾಡಿ ಗ್ರಾ.ಪಂ ಅಧ್ಯಕ್ಷೆ ಇಂದ್ರವ್ವ ಹಣಮಂತ ಗಡ್ಡಿ, ಹೆಗ್ಗೂರು ಗ್ರಾ.ಪಂ ಅಧ್ಯಕ್ಷ ಪ್ರಕಾಶ ಶಂಕರನಾಯಕ, ಸೊನ್ನ ಗ್ರಾ.ಪಂ ಉಪಾಧ್ಯಕ್ಷ ಶ್ರೀಶೈಲ ಲಗಳಿ, ಜಿಲ್ಲಾ ಯುನಿಯನ್ ನಿರ್ದೇಶಕ ನಿಂಗಣ್ಣ ಗೋಡಿ, ಗಿರಿಸಾಗರದ ಮಲ್ಲಿಕಾರ್ಜುನ ಚಿತ್ರಬಾನುಕೋರಿ ಉಪಸ್ಥಿತರಿದ್ದರು.