ನಿಮ್ಮ ಸುದ್ದಿ ರಾಯಚೂರು
ಜನೇವರಿ ನಂತರ ರಾಜ್ಯದ ಎಲ್ಲ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಆರಂಭವಾಗಲಿದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಾಯಚೂರಿನ ಭಾರತ ಐಕ್ಯತಾ ಯಾತ್ರೆ ವಿಶ್ರಾಂತಿ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಕಾಂಗ್ರೆಸ್ ಪಕ್ಷ ಸೇರುವವರು ಈಗಾಗಲೇ ಸಿಎಲ್ ಪಿ ಲೀಡರ್ ಸಿದ್ದರಾಮಯ್ಯ ನಾಯಕರ ಸಂಪರ್ಕದಲ್ಲಿದ್ದಾರೆ. ಜನವರಿ ನಂತರ ಕಾಂಗ್ರೆಸ್ ಸೇರುವವರ ಪಟ್ಟಿ ಬಿಡುಗಡೆ. ಎಲ್ಲ ಪಕ್ಷಗಳಲ್ಲೂ ಪಕ್ಷಾಂತರದ ಪ್ರಯತ್ನ ಆರಂಭವಾಗಿದೆ ಎಂದರು.
ರಾಜ್ಯದ ಬಿಜೆಪಿ ಸರಕಾರ ಎಸ್ಟಿಗಳಿಗೆ ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಜಾರಿಗೆ ಮುಂದಾಗಿರುವುದು ಚುನಾವಣೆ ತಂತ್ರ. ಸಂವಿಧಾನದಲ್ಲಿ ತಿದ್ದುಪಡಿ ತರದೇ ಮೀಸಲಾತಿ ಹೆಚ್ಚಳಕ್ಕೆ ಮುಂದಾದರೆ ಪ್ರಯೋಜನ ವಿಲ್ಲ. ವಿಶೇಷ ಅಧಿವೇಶನ ಕರೆದು ಅನುಮೋದನೆ ಪಡೆದು ಕೇಂದ್ರಕ್ಕೆ ಕಳಿಸಿ ಕಾಯಿದೆಯಾಗಿ ರೂಪಿಸಬೇಕು ಎಂದು ಆಗ್ರಹಿಸಿದರು.
ಎಸ್ಟಿ ಮೀಸಲು ಜಾರಿ ವಿಚಾರದಲ್ಲಿ ಸಚಿವ ಶ್ರೀರಾಮುಲು ಅವರೇ ಕಾರಣ ಎಂದು ಬಿಜೆಪಿ ಬಿಂಬಿಸುತ್ತಿದೆ. ವಾಲ್ಮೀಕಿ ಸಮಾಜದ ಸ್ವಾಮೀಜಿ ಆರು ತಿಂಗಳವರೆಗೆ ಹೋರಾಟ ಮಾಡಿದ ನಂತರ ಮೀಸಲು ಹೆಚ್ಚಳಕ್ಕೆ ಸರಕಾರ ಮುಂದಾಗಿದ್ದನ್ನು ಶ್ರೀರಾಮುಲು ಕಾರಣ ಎಂದು ಹೇಳುವುದು ಸರಿಯಲ್ಲ ಎಂದರು.
ಸ್ವಾಮೀಜಿ ಅವರು ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ್ದಕ್ಕೆ ಬೆಚ್ಚಿದ ಸರಕಾರ ಮೀಸಲಾತಿ ಜಾರಿಗೆ ತಂದಿದೆ. ವಿನಾಃ ಶ್ರೀರಾಮುಲು ಅವರು ಇದನ್ನು ಜಾರಿಗೆ ತರಲು ಹೋರಾಟ ಮಾಡಿದ್ದಕ್ಕಲ್ಲ ಎಂದರು.
ತಮ್ಮ ಸಹೋದರ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಸೇರಲಿದ್ದಾರೆಂಬದರ ಬಗ್ಗೆ ಮಾಹಿತಿಯಿಲ್ಲ. ತಾವು ತಮ್ಮ ಕ್ಷೇತ್ರ ಬಿಟ್ಟು ಹೊರಗೆ ಸ್ಪರ್ಧಿಸಲ್ಲ. ಕಾಂಗ್ರೆಸ್ ಪಕ್ಷದ ಗೆಲುವಿನ ಬಗ್ಗೆ ಸಮೀಕ್ಷೆ ಮಾಡಿಸುವುದು ಸಾಮಾನ್ಯ ಎಂದು ಹೇಳಿದರು.