This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Politics News

ಪ್ರವಾಹ, ಮಳೆಯಿಂದ ೧೨೦೯೩ ಮನೆಗಳು ಹಾನಿ : ಡಿಸಿಎಂ ಕಾರಜೋಳ

ನಿಮ್ಮ ಸುದ್ದಿ ಬಾಗಲಕೋಟೆ

ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷದ ಪ್ರವಾಹ ಮತ್ತು ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ೧೨೦೯೩ ಮನೆಗಳು ಹಾನಿಗೀಡಾಗಿವೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ನಗರದ ನೂತನ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಾನಿಗೊಳಗಾದ ಮನೆಗಳಲ್ಲಿ ಎ ಕೆಟಗರಿಯಲ್ಲಿ ೫೭೭, ಬಿ ಕೆಟಗರಿಯಲ್ಲಿ ೨೭೧೯ ಹಾಗೂ ಸಿ ಕೆಟಗರಿಯಲ್ಲಿ ೮೭೯೭ ಮನೆಗಳು ಎಂದು ಗುರುತಿಸಲಾಗಿದೆ. ಈ ಸಂಖ್ಯೆ ಇನ್ನು ಹೆಚ್ಚಿಗೆ ಆಗುವ ಸಾದ್ಯತೆ ಇರುವುದಾಗಿ ತಿಳಿಸಿದರು. ಹಾನಿಗೊಳಗಾದ ಕುಟುಂಬಗಳಿಗೆ ಈಗಾಗಲೇ ೧೫೪ ಕೋಟಿ ರೂ.ಗಳ ಪರಿಹಾರಧನ ವಿತರಿಸಲಾಗಿದೆ ಎಂದರು.
ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆ ಸೇರಿದಂತೆ ಒಟ್ಟು ೧,೧೨,೫೨೫ ಹೆಕ್ಟೇರ್ ಪ್ರದೇಶ ಹಾನಿಯಾಗಿದ್ದು, ಈಗಾಗಲೇ ೭.೨೧ ಕೋಟಿ ರೂ.ಗಳನ್ನು ೮೯೮೨೯ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ೧೨೮ ಕಿ.ಮೀ ರಾಜ್ಯ ಹೆದ್ದಾರಿ, ೩೦೯ ಕಿ.ಮೀ ಜಿಲ್ಲಾ ಮುಖ್ಯ ರಸ್ತೆ, ೫೪ ಬ್ರೀಡ್ಜ ಹಾಗೂ ಬಾಂದಾರಗಳು ಹಾನಿಗೀಡಾಗಿದ್ದು, ಸರಕಾರದಿಂದ ೨೫ ಕೋಟಿ ರೂ.ಗಳ ಅನುದಾನ ಬಿಡುಗಡೆಮಾಡಲಾಗಿದೆ. ಈ ಪೈಕಿ ೨೬ ಕಾಮಗಾರಿಗಳನ್ನು ಪ್ರಾರಂಭಿಸಿರುವುದಾಗಿ ತಿಳಿಸಿದರು.

ಪಂಚಾಯರ ರಾಜ್ ಇಲಾಖೆಯಿಂದ ೧೪೪೮ ಕಿ.ಮೀ ರಸ್ತೆ, ೨೯ ಕುಡಿಯುವ ನೀರಿನ ಯೋಜನೆಗಳು ಹಾಗೂ ೩೪ ಬ್ರೀಡ್ಜ್ ಹಾಗೂ ಬಾಂದಾರುಗಳು ಹಾನಿಯಾಗಿವೆ. ಜಿಲ್ಲೆಯ ೫ ತಾಲೂಕುಗಳಲ್ಲಿ ಒಟ್ಟು ೧೧೭ ಕೈಮಗ್ಗದ ಉಪಕರಣ ಹಾಗೂ ಸಾಮಗ್ರಿಗಳು ಹಾನಿಯಾಗಿದ್ದು, ಅದಕ್ಕಾಗಿ ೭ ಲಕ್ಷಗಳ ಪರಿಹಾರವನ್ನು ಪಾವತಿಸಲು ಸೂಚಿಸಲಾಗಿದೆ. ಕಳೆದ ಒಂದು ವರ್ಷ ರಾಜ್ಯದಲ್ಲಿ ಪ್ರವಾಹ, ಮಳೆ ಹಾಗೂ ಕೊರೊನಾದಿಂದ ಸಾಕಷ್ಟು ಹಾನಿ ಉಂಟಾಗಿದ್ದು, ೧೧ ತಿಂಗಳ ರಾಜ್ಯಕ್ಕೆ ಬರಬೇಕಾದ ಆದಾಯ ಬರುತ್ತಿಲ್ಲ. ಸರಕಾರಕ್ಕೆ ಬರುವ ನಿಗದಿತ ಆದಾಯ ಬರುತ್ತಿಲ್ಲ. ಶೇ.೩೦ ಕ್ಕಿಂತ ಹೆಚ್ಚಿನ ಆದಾಯ ಬಂದಿರುವದಿಲ್ಲ. ಇದರಿಂದ ಅಭಿವೃದ್ದಿಗೆ ಹಿನ್ನಡೆಯಾಗಿದೆ ಎಂದು ತಿಳಿಸಿದರು.

ಪ್ರವಾಹ, ನೆರೆ ಹಾಗೂ ಕೋವಿಡ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡೆಯೂರಪ್ಪನವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಬೇರೆ ರಾಜ್ಯದಲ್ಲಿ ಸರಕಾರಿ ನೌಕರರಿಗೆ ಸಂಬಳ ನಿಲ್ಲಿಸಿದ್ದಾರೆ. ಆದರೆ ರಾಜ್ಯದಲ್ಲಿ ಸರಕಾರಿ ನೌಕರರ ಸಂಬಳ ನಿಲ್ಲಿಸದೇ ನೀಡಿದ್ದಾರೆ. ಕೋವಿಡ್-೧೯ ಸೋಂಕು ತಡೆಗಟ್ಟಲು ಹಾಗೂ ಕಡಿಮೆ ಮಾಡಲು ಎಲ್ಲ ರೀತಿಯಿಂದ ಕ್ರಮಕೈಗೊಂಡಿದ್ದಾರೆ. ಬರುವ ಜನವರಿ ಮಾಹೆಯಲ್ಲಿ ಕೋವಿಡ್-೧೯ಗೆ ಸಲಿಕೆ ಕೂಡ ಬರಲಿದ್ದು, ಎಲ್ಲರಿಗೂ ನೀಡುವ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರಜೋಳರಿಂದ ದೀಪಾವಳಿ ಹಬ್ಬದ ಶುಭಾಶಯಗಳು

ಸರಕಾರ ಹೊರಡಿಸಿದ ಮಾರ್ಗಸೂಚಿಯನ್ವಯ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್-೧೯ ಸೋಂಕು ಹರಡುವುದನ್ನು ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು. ಸರಕಾರ ಅನುಮತಿ ನೀಡಿದ ಹಸಿರು ಪಟಾಕಿಗಳನ್ನು ಮಾತ್ರ ಬಳಸುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಬೇಕು. ಇದೇ ಸಂದರ್ಭದಲ್ಲಿ ಸಮಸ್ತ ನಾಗರಿಕರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.