ಅಂತಿಮ ಡಿ.ಪಿ.ಆರ್ ತಯಾರಿಸುವ ಕುರಿತು ಸಲಹಾ ಸಮಿತಿ ಸಭೆ
ನಿಮ್ಮ ಸುದ್ದಿ ಬಾಗಲಕೋಟೆ
ಬೆಳಗಾವಿ-ಹುನಗುಂದ 168 ಕಿ.ಮೀ ಮತ್ತು ಹುನಗುಂದ-ರಾಯಚೂರ 156 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿಯ ಡಿಪಿಆರ್ ತಯಾರಿಸುವ ಕುರಿತಂತೆ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಲಹಾ ಸಮಿತಿ ಸಭೆ ಜರುಗಿತು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಲಹಾ ಸಭೆಯಲ್ಲಿ ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಭಾರತಮಾಲಾ ಪರಿಯೋಜನೆಯ ಹೈದರಾಬಾದ-ಪಣಜಿ ಕಾರಿಡಾರ್ ಯೋಜನೆಯಡಿ ರಸ್ತೆ ಕಾಮಗಾರಿ ವಿಸ್ತøತ ಯೋಜನೆ ಕುರಿತು ಚರ್ಚೆ ನಡೆಸಲಾಯಿತು. ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಜಮೀನನ್ನು ಹೊರತುಪಡಿಸಿ ಯೋಜನೆ ರೂಪಿಸಿ ಇಲ್ಲವಾದಲ್ಲಿ ಋಣಭಾರ ಪತ್ರ ಪಡೆಯಲು ಕಾಲವಿಳಂಬವಾಗುತ್ತದೆ. ಅಲ್ಲದೇ ಜಿಲ್ಲೆಯಲ್ಲಿ ಬರುವ ಐತಿಹಾಸಿಕ ಕ್ಷೇತ್ರ ವ್ಯಾಪ್ತಿಯ ಪ್ರದೇಶ ಬರದಂತೆ ಯೋಜನೆ ಸಿದ್ದಪಡಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಬೆಳಗಾವಿಯಿಂದ ಜಿಲ್ಲೆಯ ಬಾರ್ಡರ್ ಬಾದಾಮಿ ತಾಲೂಕಿನ ಜಂಗವಾಡದಿಂದ ಹುನಗುಂದಕ್ಕೆ ಮುಕ್ತಾಯಗೊಳ್ಳುವ ಒಟ್ಟು 96 ಕಿ.ಮೀ ಅಂದಾಜು ಯೋಜನೆ ಇದ್ದು, ಈ ಯೋಜನೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗುವ ಹೆದ್ದಾರಿ ಕಾಮಗಾರಿಯ ಅಲೈನ್ಮೆಂಟ್ ಸಿದ್ದಪಡಿಸುವಲ್ಲಿ ಅಧಿಕಾರಿಗಳಿಂದ ಪಡೆಯಲಾದ ಸಲಹೆ ಮತ್ತು ನಿರ್ದೇಶನಗಳನ್ನು ಪಾಲಿಸುವಂತೆ ಸಂಸದ ಪಿ.ಸಿ.ಗದ್ದಿಗೌಡರ ಕಾರಿಡಾರ ಯೋಜನೆಯ ಯೋಜನಾ ನಿರ್ದೇಶಕ ಅಜಯ ಮಾನಿಕುಮಾರ ಅವರಿಗೆ ತಿಳಿಸಿದರು.
ಕಾಮಗಾರಿಯ ಯೋಜನಾ ಸಂಯೋಜಕ ವೇನುಗೋಪಾಲ ಪಿಪಿಟಿ ಮೂಲಕ ಯೋಜನೆ ಸಂಪೂರ್ಣ ಮಾಹಿತಿಯನ್ನು ವಿವರಿಸುತ್ತಾ, ಭಾರತದಲ್ಲಿ ಸರಕು ಸಾಗಣೆಯ ದಕ್ಷತೆಯನ್ನು ಸುಧಾರಿಸಲು ಆರ್ಥಿಕ ಕಾರಿಡಾರ್, ಅಂತರ ಕಾರಿಡಾರ್ ಮತ್ತು ಫೀಡರ್ ಮಾರ್ಗಗಳ ಅಭಿವೃದ್ಧಿಗೆ ಡಿಪಿಆರ್ ತಯಾರಿಸಲಾಗುತ್ತಿದೆ. ಭರತಮಾಲಾ ಪರಿಯೋಜನಾ ಲಾಟ್ 5, ಪ್ಯಾಕೇಜ್ನಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಆರ್ಥಿಕ ಕಾರಿಡಾರ್ಗಳನ್ನು ಪ್ರಾಥಮಿಕವಾಗಿ ಗುರುತಿಸಲಾಗಿದ್ದು, ದೇಶದಾದ್ಯಂತ ತಡೆರಹಿತ ಸರಕು ಸಾಗಣೆಯನ್ನು ಕೊನೆಗೊಳಿಸಲು ಸಾಧ್ಯವಾಗುತ್ತದೆ. ಈ ವಿಸ್ತರಣೆಗಳು ಕನಿಷ್ಟ 4 ಲೇನ್ ಎನ್ಎಚ್ ಮಾನದಂಡಗಳಿಗೆ ವಿಶೇಷವಾಗಿ ಆರ್ಥಿಕ ಕಾರಿಡಾರ್ಗಳಿಗೆ ಅಭಿವೃದ್ಧಿಯಾಗಿದೆ. ಭರತಮಾಲಾ ಪರಿಯೋಜನಾ ಲಾಟ್ 5ರ ಭಾಗವಾಗಿ, ಬೆಳಗಾವಿ-ಹುನಗುಂದ, ಹುನಗುಂದ–ರಾಯಚೂರು ಮಾರ್ಗವಾಗಿದ್ದು. ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಹಾದು ಹೋಗುವದಿಲ್ಲ, ಗ್ರೀನ್ ಪೀಲ್ಡ ಪ್ರದೇಶದಲ್ಲಿಯೇ ಹೆದ್ದಾರಿ ರಸ್ತೆ ಮಾಡಲಾಗುತ್ತಿದೆ. ಯೋಜನೆಯ ಡಿಪಿಆರ್ ಸಿದ್ದಪಡಿಸಿ ಅನುಮೋದನೆ ಪಡೆದ ನಂತರ ಹೆದ್ದಾರಿ ಕಾಮಗಾರಿ 2022 ರಿಂದ ಪ್ರಾರಂಭಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಪ್ರಶಾಂತ, ಜಿಲ್ಲಾ ವಲಯ ಅರಣ್ಯ ಸಂರಕ್ಷಣಾಧಿಕಾರಿ ನಗರಸಭೆ ಪೌರಾಯುಕ್ತ ಮುನಿಷಾಮಪ್ಪ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಸೇರಿದಂತೆ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.