ನಿಮ್ಮ ಸುದ್ದಿ ಬಾಗಲಕೋಟೆ
ಭವಿಷ್ದದ ಕುಡಿಗಳ ನಿರ್ಮಾಣ ಕೇಂದ್ರವೆಂದೇ ಬಿಂಬಿತವಾದ ಅಂಗನವಾಡಿ ಕೇಂದ್ರಗಳು, ಅಲ್ಲಿನ ಸ್ಥಿತಿಗತಿ ಕುರಿತು ಪಟ್ಟಣ ಪಂಚಾಯತ್ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಸಭೆ ನಡೆದಿದೆ. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಪಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪಟ್ಟಣ ಅಭಿವೃದ್ಧಿಯ ತುಡಿತದಲ್ಲಿರುವ ಸದಸ್ಯರು ಅಂಗನವಾಡಿಗೆ ಆಗಮಿಸುವ ಮಕ್ಕಳ ಶಿಕ್ಷಣ ಉತ್ತಮವಾದರೆ ಪ್ರಗತಿ ತನ್ನಿಂತಾನೆ ಆಗುತ್ತದೆ. ಅವುಗಳಿಗೆ ಮೂಲ ಸೌಲಭ್ಯ ಒದಗಿಸುವಲ್ಲಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು ಎನ್ನಲಾಗಿದೆ.
ಈ ಹಿಂದೆ ಗ್ರಾಪಂ ಅವಧಿಯಲ್ಲಿ ವಾರ್ಡ್ ವಾರು ಕೇಂದ್ರಗಳಿದ್ದು ಪಪಂ ಪರಿವರ್ತನೆ ನಂತರ ವಾರ್ಡ್ ಗಳ ಸಂಖ್ಯೆ ಹಾಗೂ ಕೇಂದ್ರ ವ್ಯಾಪ್ತಿ ಬದಲಾವಣೆ ಆಗಿದೆ. ಪಪಂ ರೂಪಿಸಿದ ವಾರ್ಡ್ ಗೆ ಒಂದರಂತೆ ಅಂಗನವಾಡಿ ಕೇಂದ್ರಗಳಿರಬೇಕು. ಕೇಂದ್ರಗಳಿಗೆ ಸರಿಯಾದ ಆಹಾರ ಪೂರೈಕೆ ಅಗುವುದಲ್ಲದೆ ಫಲಾನುಭವಿಗಳಿಗೂ ಸರಿಯಾಗಿ ಪೂರೈಕೆ ಆಗಬೇಕು ಎಂದು ಸದಸ್ಯರು ಆಗ್ರಹಿಸಿದರೆನ್ನಲಾಗಿದೆ.
ಜತೆಗೆ ಪಟ್ಟಣದ ಅರ್ಧದಷ್ಟು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿದ್ದು ಅವುಗಳಿಗೆ ನೀಡುವ ಬಾಡಿಗೆ ಕುರಿತ ಮಾಹಿತಿ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚೆ ನಡೆಯಿತೆನ್ನಲಾಗಿದೆ.
ಮೇಲಿಂದ ಮೇಲೆ ಸಭೆಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಸಭೆಗೆ ಬರಮಾಡಿಕೊಳ್ಳದೆ ಮೇಲ್ವಿಚಾರಕರಿಂದ ಮಾಹಿತಿ ಪಡೆದು ಸುಧಾರಣೆಗೆ ಮುಂದಾಗಬೇಕು ಎಂದು ಸದಸ್ಯರೊಬ್ಬರು ತಿಳಿ ಹೇಳಿದರೆನ್ನಲಾಗಿದೆ.