This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಕಳ್ಳಬಟ್ಟಿಯಿಂದಾಗುವ ಅನಾಹುತ ತಪ್ಪಿಸಿ:ಡಿಸಿ ರಾಜೇಂದ್ರ

ನಿಮ್ಮ ಸುದ್ದಿ ಬಾಗಲಕೋಟೆ

ಕಳ್ಳಬಟ್ಟಿಗಳ ಮೇಲೆ ಕಾಲ ಕಾಲಕ್ಕೆ ದಾಳಿ ನಡೆಸಿ ಪ್ರಕರಣ ದಾಖಲಿಸುವ ಮೂಲಕ ಅದರಿಂದಾಗುವ ಅನಾಹುತಗಳನ್ನು ತಪ್ಪಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ವಿಡಿಯೋ ಸಂವಾದ ಹಾಲ್‍ನಲ್ಲಿಂದು ಜರುಗಿದ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಬಕಾರಿ ದಾಳಿಗಳ ಸಮಯದಲ್ಲಿ ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ, ಅರಣ್ಯ ಇಲಾಖೆಗಳ ಸಿಬ್ಬಂದಿಗಳ ಸಹಕಾರ ಪಡೆಯಲು ತಿಳಿಸಿದರು.

ಕಳ್ಳಬಟ್ಟಿ ತಯಾರಿಸಲು ಉಪಯೋಗಿಸುತ್ತಿದ್ದ ಕಚ್ಚಾ ವಸ್ತುಗಳಾದ ಬೆಲ್ಲ ಮಾರಾಟ ಮಾಡುತ್ತಿರುವ ಹೋಲ್‍ಸೆಲ್ ಮಾರಾಟಗಾರರಿಗೆ, ಸಾರಾಯಿಗೆಂದೇ ತಯಾರಿಸುತ್ತಿದ್ದ ಗಡಿಗೆ ತಯಾರಿಸುವ ಕುಂಬಾರನಿಗೆ ನೋಟಿಸ್ ಜಾರಿ ಮಾಡಲು ತಿಳಿಸಿದರು. ಅಲ್ಲದೇ ಕೆಲವೊಂದು ಕೆರೆಯ ದಂಡೆಯ ಮೇಲೆ ಕಳ್ಳಬಟ್ಟಿ ತಯಾರಿಸಲು ಬೆಲ್ಲದ ಪಾಕವನ್ನು ಸಂಗ್ರಹಿಸುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಮೀನುಗಾರಿಗೆ ಇಲಾಖೆಯವರು ಕೆರೆ ಗುತ್ತಿಗೆ ಕೊಟ್ಟ ಗುತ್ತಿಗೆದಾರರಿಗೆ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಕೆರೆ ಗುತ್ತಿಗೆಯನ್ನು ನೆಪ ಮಾತ್ರಕ್ಕೆ ಪಡೆದರೆ ಸಾಲದು. ಆ ಕೆರೆಯಲ್ಲಿ ಮೀನು ಸಾಗಾಣಿಕೆ ಮಾಡಬೇಕು. ಇಲ್ಲವಾದರೆ ಕೆರೆಯ ದಂಡೆಯ ಪ್ರದೇಶದಲ್ಲಿ ಅಕ್ರಮ ಕಳ್ಳಬಟ್ಟಿ ಕಾರ್ಯ ನಡೆಸಲು ಅವಕಾಶ ಕೊಟ್ಟಂತಾಗುತ್ತದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೆರ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದು ಮಾಡುವದರ ಜೊತೆಗೆ ಅವರ ಮೇಲೆ ಪ್ರಕರಣ ಸಹ ದಾಖಲಿಸಲು ಸೂಚಿಸಿದರು. ಕಳ್ಳಬಟ್ಟಿ ಹೆಚ್ಚಾಗಿ ಕಂಡು ಬರುವ ಪ್ರದೇಶದಲ್ಲಿ ದಾಳಿ ಹೆಚ್ಚಾಗಿ ನಡೆಸಿ ನಿಯಂತ್ರಣಕ್ಕೆ ಕ್ರವಹಿಸಲು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಜಿಲ್ಲೆಯಲ್ಲಿ ನಡೆಸುತ್ತಿರುವ ಅಬಕಾರಿ ದಾಳಿಯ ವೇಳೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ತಾಂಡಾಗಳಲ್ಲಿರುವ ನೋಂದಣಿ ಹಾಗೂ ದಾಖಲೆ ಇಲ್ಲದಂತಹ ಗೂಡ್ಸ್ ವಾಹನ ಸೇರಿದಂತೆ ಇತರೆ ವಾಹನಗಳನ್ನು ಜಪ್ತಿಗೆ ಕ್ರಮವಹಿಸಲು ತಿಳಿಸಿದರು. ಅರಣ್ಯ ಪ್ರದೇಶದಲ್ಲಿ ಕಳ್ಳಬಟ್ಟಿ ತಯಾರಿಸುತ್ತಿರುವುದು ಕಂಡು ಬಂದಲ್ಲಿ ಅಬಕಾರಿ ಇಲಾಖೆಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಅಬಕಾರಿ ಉಪ ಆಯುಕ್ತ ರಮೇಶ ಕುಮಾರ ಎಚ್ ಅವರು ಮಾತನಾಡಿ ಜಿಲ್ಲೆಯ ಮುಧೋಳ ಮತ್ತು ಜಮಖಂಡಿಯಲ್ಲಿ ಕಳ್ಳಬಟ್ಟಿ ಸಾರಾಯಿ ನಿಯಂತ್ರಣಕ್ಕೆ ಬಂದಿದೆ. ಸದ್ಯ ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾ ಮತ್ತು ಹುನಗುಂದ ತಾಲೂಕಿನ ಅಮೀನಗಡ ತಾಂಡಾಗಳಲ್ಲಿ ಕಳ್ಳಬಟ್ಟಿ ತಯಾರಿಕೆ ಹೆಚ್ಚಾಗಿ ಕಂಡುಬರುತ್ತಿದೆ. ಅಮೀನಗಡ ತಾಂಡಾದ ಕೆರೆಯ ನೀರಿನಲ್ಲಿ ಅಕ್ರಮವಾಗಿ ಬೆಲ್ಲದ ಕೊಳೆಯನ್ನು ಮುಚ್ಚಿಟ್ಟು ನಂತರ ಅದರಿಂದ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ತಯಾರಿಸುವ ಕೆಲಸವಾಗುತ್ತಿದೆ. ಇದನ್ನು ತಡೆಗಟ್ಟಲು ದಾಳಿಯ ಸಮಯದಲ್ಲಿ ಸಹಕರಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ನಿರ್ದೇಶಕರು ನಿರ್ದೇಶನ ನೀಡಿರುತ್ತಾರೆ ಎಂದರು.
ಜಿಲ್ಲೆಯ ಬಾಗಲಕೋಟೆ ಶಹರದಲ್ಲಿ ಬೆಲ್ಲವನ್ನು ಮಾರಾಟ ಮಾಡುತ್ತಿರುವ ಹೋಲಸೆಲ್ ವ್ಯಾಪಾರಸ್ಥರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಕಳ್ಳಬಟ್ಟಿ ಸಾರಾಯಿ ತಯಾರಿಕೆಗೆ ಪೂರಕವಾದ ಕಚ್ಚಾ ವಸ್ತು ಬೆಲ್ಲವನ್ನು ಖರೀದಿಸುವಂತಹ ಜನರ ಮಾಹಿತಿಯನ್ನು ಸಹ ಕಲೆ ಹಾಕಲಾಗುತ್ತಿದೆ. ಕುಂಬಾರಿಕೆ ನಡೆಸುತ್ತಿರುವ ವ್ಯಕ್ತಿಗಳ ಖುದ್ದಾಗಿ ಸಂಪರ್ಕಿಸಿ ಗಡಿಗೆಯ ಮೇಲೆ ಮುಚ್ಚುವ ಮುಚ್ಚಳವನ್ನು ಅಕ್ರಮ ಕಳ್ಳಬಟ್ಟಿ ಸರಾಯಿ ತಯಾರಿಸುವಂತಹ ಸಲಕರಣೆ ತಯಾರಿಸದಂತೆ ತಿಳುವಳಿಕೆ ಹಾಗೂ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕಳೆದ ವರ್ಷ ಜುಲೈ ಮಾಹೆಯಿಂದ ಜನವರಿ, 2021 ವರೆಗೆ ಒಟ್ಟು 1114 ಅಬಕಾರಿ ದಾಳಿ ನಡೆಸಲಾಗಿ 79 ಪ್ರಕರಣ ದಾಖಲಿಸಲಾಗಿದೆ. 60 ಜನ ಆರೋಪಿಗಳನ್ನು ಬಂಧಿಸುವದರ ಜೊತೆಗೆ 383 ಲೀಟರ್ ಕಳ್ಳಬಟ್ಟಿ ಸಾರಾಯಿ, 465 ಲೀಟರ್ ಬೆಲ್ಲದ ಕೊಳೆ ಹಾಗೂ ಎರಡು ಆಟೋ ಮತ್ತು 29 ದ್ವೀಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಸಿಇಓ ಟಿ.ಭೂಬಾಲನ್, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಕಂದಾಯ ಇಲಾಖೆಯ ಶಿರಸ್ತೆದಾರ ನಾಯ್ಕಲಮಠ ಸೇರಿದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

";