ಐಪಿಎಲ್ ಸೀಸನ್ 17 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹೊರಬಿದ್ದಿದ್ದು, ಈ ಬಾರಿಯ ಟೂರ್ನಿಯಲ್ಲಿ ಹೊಸ ಅಧ್ಯಾಯ ಬರೆಯುವ ಹುರುಪಿನೊಂದಿಗೆ ಕಣಕ್ಕಿಳಿದಿದ್ದ ಆರ್ಸಿಬಿ ತಂಡಕ್ಕೆ ನಿರೀಕ್ಷಿತ ಆರಂಭ ಸಿಕ್ಕಿರಲಿಲ್ಲ. ಅಲ್ಲದೆ ಮೊದಲಾರ್ಧದ 7 ಪಂದ್ಯಗಳಲ್ಲಿ 6 ರಲ್ಲಿ ಸೋಲನುಭವಿಸಿತ್ತು.
ಈ ಸೋಲಿನ ನೋವಿನ ನಡುವೆಯೂ ವಿರಾಟ್ ಕೊಹ್ಲಿ ಆರ್ಸಿಬಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಟೂರ್ನಿಯುದ್ಧಕ್ಕೂ ಬೆಂಬಲ ನೀಡಿರುವ ನಮ್ಮ ಫ್ಯಾನ್ಸ್ಗೆ ನಾನು ಕೃತಜ್ಞನಾಗಿರುತ್ತೀನಿ ಎಂದು ಕಿಂಗ್ ಕೊಹ್ಲಿ ಹೇಳಿದ್ದಾರೆ.
ಈ ಬಾರಿ ನಾವು ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ಎಂದಿನಂತೆ ಈ ಸಲ ಕೂಡ ನಮ್ಮ ಅಭಿಮಾನಿಗಳ ಬೆಂಬಲ ಅಚಲವಾಗಿತ್ತು. ನಾವು ಸೋತರೂ, ಗೆದ್ದರೂ ಅವರ ಪ್ರೀತಿ ಭಿನ್ನವಾಗಿರಲಿಲ್ಲ. ಇಡೀ ಸೀಸನ್ನಲ್ಲಿ ಅವರ ಬೆಂಬಲವು ಅಚಲವಾಗಿತ್ತು.
ತವರು ಮೈದಾನದಲ್ಲಿ ಮಾತ್ರವಲ್ಲದೆ ಇತರೆ ಸ್ಟೇಡಿಯಂನಲ್ಲೂ ನೀವು ಅಪಾರ ಸಂಖ್ಯೆಯಲ್ಲಿ ಬೆಂಬಲ ನೀಡಿದ್ದೀರಿ. ನಿಮ್ಮ ಈ ಅಭೂತಪೂರ್ವ ಬೆಂಬಲಕ್ಕಾಗಿ ನಾನು ಎಂದೆಂದಿಗೂ ಕೃತಜ್ಞನಾಗಿರುತ್ತೀನಿ. ನಿಮ್ಮ ಬೆಂಬಲ ಮತ್ತು ಹಾರೈಕೆಗೆ ತುಂಬಾ ಹೃದಯದ ಧನ್ಯವಾದಗಳು ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ದ್ವಿತೀಯಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆರ್ಸಿಬಿ 7 ಮ್ಯಾಚ್ಗಳಲ್ಲಿ 6 ರಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿ ಪ್ಲೇಆಫ್ಗೆ ಪ್ರವೇಶಿಸಿತು. ಆದರೆ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಇದೀಗ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದೆ.