ಚಿತ್ರದುರ್ಗ: ಕಾವಿತೊಟ್ಟ ಮಠಾಧೀಶರು ರಾಜಕೀಯದ ಬಗ್ಗೆ ಮಾತನಾಡುತ್ತಿರೋದಕ್ಕೆ ರಾಜಕೀಯ ರಂಗದಲ್ಲೇ ವಿರೋಧ, ಆಕ್ಷೇಪ ವ್ಯಕ್ತವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ಗೆ ಸಿಎಂ ಸ್ಥಾನ ನೀಡಬೇಕು ಅಂತ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಕುರುಬ ಸಮುದಾಯದ ಸ್ವಾಮೀಜಿಗಳು ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದರು. ಹೀಗೆ ಸ್ವಾಮೀಜಿಗಳ ಹೇಳಿಕೆಗೆ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಆಕ್ಷೇಪಿಸಿದ್ದರು. ಇದೀಗ ರಾಜಕಾರಣಿಗಳ ವಿರುದ್ಧ ಪ್ರಣವಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ. ರಾಜಕಾರಣಿಗಳು ಮಠಕ್ಕೆ ಕಾಲಿಡಬೇಡಿ ಅಂತ ಆಕ್ರೋಶದ ಮಾತುಗಳನ್ನಾಡಿದ್ದಾರೆ.
ರಾಜಕಾರಣಿಗಳು ಮಠಕ್ಕೆ ಕಾಲಿಡಬೇಡಿ
ಚಿತ್ರದುರ್ಗದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಪ್ರಣವಾನಂದ ಸ್ವಾಮೀಜಿ, ಸ್ವಾಮೀಜಿಗಳು ರಾಜಕೀಯ ಮಾಡಬೇಡಿ ಅನ್ನುತ್ತಾರೆ. ಹಾಗಾದರೆ ರಾಜಕೀಯ ನಾಯಕರು ಮಠಕ್ಕೆ ಕಾಲಿಡಬೇಡಿ. ನೀವು ನಾಳೆಯಿಂದ ಮಠಕ್ಕೆ ಬರಬೇಡಿ. ಆಗ ನಾವು ಪೂಜೆ ಮಾಡಿಕೊಂಡು ಇರುತ್ತೇವೆ ಅಂತ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಮಾಲೆ ಹಾಕಿ ನಾಟಕ ಮಾಡುತ್ತೀರಾ?
ಎಲೆಕ್ಷನ್ ವೇಳೆ ಮಠಕ್ಕೆ ಬಂದು, ಮಾಲೆ ಹಾಕಿ ನಾಟಕ ಮಾಡುತ್ತೀರಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾಮೀಜಿಗಳು ಮಾತನಾಡಬಾರ್ದು ಅಂತ ಇದೆಯಾ? ಅಂತ ಸ್ವಾಮೀಜಿ ಕಿಡಿಕಾರಿದ್ರು. ನಾವು ಕೂಡಾ ಅನ್ನ ಊಟ ಮಾಡುತ್ತೇವೆ, ಸಂವಿಧಾನ ನಮಗೂ ಹಕ್ಕು ನೀಡಿದೆ. ಮಠಗಳಿಂದ ಎಲ್ಲವೂ ಬೇಕು, ಮಾತನಾಡುವುದು ಮಾತ್ರ ಬೇಡ. ಸ್ವಾಮೀಜಿಗಳ ಹಕ್ಕನೇ ಕಸಿಯುವುದು ಬೇಡ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇರೆಯವರಿಗೆ ಅವಕಾಶ ಮಾಡಿಕೊಡಿ
ವಿನಾಶ ಕಾಲಕ್ಕೆ ವಿಪರೀತ ಬುದ್ದಿ ಬೇಡ. ಅವಕಾಶ ಸಿಕ್ಕಿದವರು, ಬೇರೆಯವರಿಗೆ ಅವಕಾಶ ಕೊಡುವುದು ದೊಡ್ಡ ಧರ್ಮ. ಕೊಟ್ಟ ಮಾತು ನಡೆಸಿದರೇ ರಾಜಕಾರಣದಲ್ಲಿ ಉತ್ತಮ ಸಂದೇಶ ಕೊಟ್ಟಂತೆ ಆಗುತ್ತದೆ ಅಂತ ಪ್ರಣವಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಸ್ವತಂತ್ರ ಪಕ್ಷದ ಸುಳಿವು ಕೊಟ್ಟ ಸ್ವಾಮೀಜಿ
ಈಡಿಗ ಮತ್ತು ಬಿಲ್ಲವ ಸಮುದಾಯ ಕಾಂಗ್ರೆಸ್ ಪರವಾಗಿದೆ. ಆದರೆ ಹಿಂದುಳಿದ ಸಮಾಜಕ್ಕೆ ಕಾಂಗ್ರೆಸ್ ಏನೂ ಮಾಡುತ್ತಿಲ್ಲ. ಶಿವಮೊಗ್ಗ, ಉಡುಪಿ, ಮಂಗಳೂರು, ಕಾರವಾರ ಈ ಭಾಗದಲ್ಲಿ ನಮ್ಮ ಸಮುದಾಯ ಪ್ರಬಲವಾಗಿದೆ. ಬಹಳ ದೊಡ್ಡ ಮಟ್ಟದಲ್ಲಿ ಈ ಭಾಗದಲ್ಲಿ ನಮ್ಮ ಸಮಾಜದ ಇದೆ. ಎರಡು ರಾಷ್ಟ್ರೀಯ ಪಕ್ಷಗಳು ನಮ್ಮನ್ನ ಕಡೆಗಣಿದರೇ ಕೇರಳ ಮಾದರಿಯಲ್ಲಿ ಸ್ವತಂತ್ರ ಪಕ್ಷ ರಚನೆ ಮಾಡುತ್ತೇವೆ ಅಂತ ಸ್ವಾಮೀಜಿ ಸುಳಿವು ನೀಡಿದ್ರು.
2028ರ ಒಳಗೆ ಪಕ್ಷ ಸ್ಥಾಪನೆ ಸಾಧ್ಯತೆ
2028ರ ಒಳಗೆ ಪಕ್ಷ ಸ್ಥಾಪನೆ ಮಾಡುವ ಆಲೋಚನೆ ಇದೆ. ಸಮುದಾಯದ ಮತ ಸಮುದಾಯಕ್ಕೆ ಎಂಬ ನಿರ್ಣಯ ಮಾಡಬೇಕಿದೆ. ರಾಜ್ಯದಲ್ಲಿ 17 ಕ್ಷೇತ್ರದಲ್ಲಿ ನಮ್ಮ ಸಮಾಜ ಪ್ರಾಬಲ್ಯವಿದೆ. ಕಳೆದ ಎರಡು ವರ್ಷಗಳಿಂದ ನಮ್ಮ ಸಮುದಾಯ ಪಕ್ಷ ರಚನೆ ಚರ್ಚೆ ಇದೆ. ಬಿಲ್ಲವ ಸಮುದಾಯದ ಯುವಕರು ಹಿಂದೂ ಮುಸ್ಲಿಂ ಗಲಾಟೆಯಲ್ಲಿ ಸತ್ತಿದ್ದಾರೆ. ಕೋಮು ಗಲಭೆಗಳಿಂದ ನಮ್ಮ ಸಮುದಾಯ ಹೊರ ತರಬೇಕು ಅಂತ ಅವರು ಹೇಳಿದ್ರು.
ಸಿದ್ದರಾಮಯ್ಯ ನಮಗೆ ಅನುಕೂಲ ಮಾಡಿಲ್ಲ
ಈಡೀಗ ಸಮಾಜ ಹತ್ತಿಕ್ಕುವ ಕೆಲಸ ಸರ್ಕಾರ ಮಾಡಿದೆ ಅಂತ ಆರೋಪಿಸಿರುವ ಅವರು, ಸಿಎಂ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅಹಿಂದ ನಾಯಕರಾಗಿದ್ದಾರೆ, ಆದರೆ ನಮ್ಮ ವರ್ಗಗಳಿಗೆ ಅನುಕೂಲ ಮಾಡಿಲ್ಲ ಅಂತ ಹೇಳಿದ್ರು. ಹಿಂದಿನ ಸರ್ಕಾರದಲ್ಲಿ ಎರಡು ಮಂತ್ರಿ ಕೊಟ್ಟಿದ್ರು, ಈ ಸರ್ಕಾರ ಒಂದೇ ಕೊಟ್ಟಿದೆ. ಇನ್ನೊಂದು ಮಂತ್ರಿ ಸ್ಥಾನ ನೀಡಬೇಕು ಎಂಬುದು ನಮ್ಮ ಒತ್ತಾಯ ಅಂತ ಆಗ್ರಹಿಸಿದ್ದಾರೆ.