ಹೈದರಾಬಾದ್ ಶಾಪುರ್ ನಗರದ ಪೂರ್ಣಿಮಾ ಸ್ಕೂಲ್ನಲ್ಲಿ (Private Schools) ಘಟನೆ ನಡೆದಿದ್ದು, ನರ್ಸರಿ ಓದುತ್ತಿದ್ದ ಮಗುವಿನ (Child) ಮೇಲೆ ಅದೇ ಶಾಲೆಯ ಆಯಾ ಹಲ್ಲೆ ಮಾಡಿದ್ದಾಳೆ. ಆಕೆ ಹಲ್ಲೆ ಮಾಡಿದನ್ನು ಪಕ್ಕದ ಕಟ್ಟಡದಲ್ಲಿದ್ದ ಯುವಕನೋರ್ವ ಸೆರೆ ಹಿಡಿದಿದ್ದು, ಈ ವಿಡಿಯೋ ನೋಡಿದ (Viral Video) ಪ್ರತಿಯೊಬ್ಬರ ಕಣ್ಣಿನಲ್ಲೂ ನೀರು ಬರುತ್ತದೆ. ಅಸಲಿಗೆ ಆಗಿದ್ದೇನು? ಏನಿದು ಘಟನೆ ಅಂತ ಹೇಳ್ತೀವಿ ಕೇಳಿ (Telangana).
ಏನು ಗೊತ್ತಿರದ ಮಗುವಿನ ಮೇಲೆ ಆಯಾ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾಳೆ. ಬಾಲಕಿಯ ತಂದೆ, ಆಯಾ ಜೊತೆಗೆ ಜಗಳ ಮಾಡಿದ್ದೇ ಆರೋಪಿ ಈ ರೀತಿ ನಡೆಸಲು ಕಾರಣ ಎಂದು ತಿಳಿದು ಬಂದಿದೆ. ತಂದೆಯ ಮೇಲಿನ ಕೋಪವನ್ನು ಆರೋಪಿ ಮಹಿಳೆ ಬಾಲಕಿಯ ಮೇಲೆ ತೋರಿಸಿದ್ದಾಳೆ. ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಿಡಿಮೆಟ್ಲ ಸರ್ಕಲ್ ಇನ್ಸ್ಪೆಕ್ಟರ್ ಗಡ್ಡಂ ಮಲ್ಲೇಶ್ ಅವರು, ಶಾಪುರ ನಗರದ ಎನ್ಎಲ್ಬಿ ನಗರದಲ್ಲಿರುವ ಪೂರ್ಣಿಮಾ ಖಾಸಗಿ ಶಾಲೆಯಲ್ಲಿ ಲಕ್ಷ್ಮೀ ಎಂಬ ಮಹಿಳೆ ಕಳೆದ ಆರು ವರ್ಷದಿಂದ ಕೆಲಸ ಮಾಡ್ತಿದ್ದಾಳೆ.
ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತಾ?
ಆರು ತಿಂಗಳ ಹಿಂದೆ ಒರಿಸ್ಸಾದಿಂದ ಕಲಿಯಾ-ಸಂತೋಷಿ ಎಂಬ ದಂಪತಿ ತಮ್ಮ ಮಗುವಿನೊಂದಿಗೆ ಕೆಲಸಕ್ಕಾಗಿ ಹೈದರಾಬಾದ್ಗೆ ಆಗಮಿಸಿದ್ದರು. ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ ತಂದೆ, ಮಗುವನ್ನು ಪೂರ್ಣಿಮಾ ಸ್ಕೂಲ್ಗೆ ದಾಖಲಿಸಿದ್ದರು. ಆದರೆ ಇತ್ತೀಚೆಗೆ ಸಣ್ಣ ವಿಚಾರವೊಂದರಲ್ಲಿ ಶಾಲೆಯ ಆಯಾ ಹಾಗೂ ಬಾಲಕಿ ತಂದೆಗೆ ಜಗಳ ಆಗಿತ್ತಂತೆ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ದ್ವೇಷ ಸಾಧಿಸುತ್ತಿದ್ದ ಆಯಾ ಲಕ್ಷ್ಮೀ, ಬಾಲಕಿ ಮೇಲೆ ಹಲ್ಲೆ ಮಾಡುವ ಮೂಲಕ ಹೊರ ಹಾಕಿದ್ದಾಳೆ. ಇದನ್ನು ಸ್ಕೂಲ್ ಪಕ್ಕದ ಕಟ್ಟಡದಲ್ಲಿದ್ದ ಯುವಕನೋರ್ವ ವಿಡಿಯೋ ಮಾಡಿದ್ದಾನೆ. ಈ ವಿಡಿಯೋವನ್ನು ಬಾಲಕಿಯ ತಂದೆ-ತಾಯಿಗೆ ತೋರಿಸಿದ್ದಾನೆ. ಇದರ ನಡುವೆಯೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಘಟನೆ ನಡೆದ ದಿನವೇ ಈ ಕೃತ್ಯ ಶಾಲೆಯ ಆಡಳಿತ ಮಂಡಳಿಯ ಗಮನಕ್ಕೆ ಹೋಗಿದ್ದು, ಇಂತಹ ಘಟನೆಗಳು ಎಲ್ಲಾ ಸಾಮಾನ್ಯ ಎಂದು ಕೃತ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರಂತೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ, ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಬಾಲಕಿಯ ಮನೆಗೆ ಭೇಟಿ ನೀಡಿದಾಗ, ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಪೊಲೀಸರ ನೆರವಿನೊಂದಿಗೆ ಬಾಲಕಿಯ ಪೋಷಕರು ದೂರು ನೀಡಿದ್ದು, ಬಾಲಾನಗರ ಎಸಿಪಿ ನರೇಶ್ ರೆಡ್ಡಿ, ಜಿಡಿಮೆಟ್ಲ ಇನ್ಸ್ಪೆಕ್ಟರ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಪೋಷಕರ ದೂರು, ವೈರಲ್ ವಿಡಿಯೋ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಆಯಾರನ್ನು ಬಂಧನ ಮಾಡಿದ್ದಾರೆ. ಅಲ್ಲದೇ ಶಾಲೆಯ ಆಡಳಿತ ಮಂಡಳಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್ಪೆಕ್ಟರ್ ಮಲ್ಲೇಶ್ ತಿಳಿಸಿದ್ದಾರೆ.
ಆಯಾ, ಶಾಲೆಯ ಆಡಳಿತ ಮಂಡಳಿ ವಿರುದ್ಧ ನೆಟ್ಟಿಗರ ಕಿಡಿ
ಮಗುವಿನ ಮೇಲೆ ಹಲ್ಲೆ ನಡೆಸಿದ ಆಯಾ ಲಕ್ಷ್ಮೀ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ಆಡಳಿತ ಮಂಡಳಿಯ ವಿರುದ್ಧವೂ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಹೈದರಾಬಾದ್ ಸೇರಿದಂತೆ ಮೆಟ್ರೋ ನಗರಗಳಲ್ಲಿ ಜೀವನ ನಡೆಸಲು ತಂದೆ-ತಾಯಿ ಇಬ್ಬರೂ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದ್ದು, ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಹಿರಿಯರು ಇಲ್ಲದ ಕಾರಣ ಮಕ್ಕಳನ್ನು ಡೇಕೇರ್ ಸೆಂಟರ್ ಅಥವಾ ಆಯಾಗಳ ಬಳಿ ಬಿಟ್ಟು ಹೋಗುತ್ತಾರೆ. ಆದರೆ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕಿದ್ದ ಆಯಾ ಇಂತಹ ಆಘಾತಕಾರಿ ವರ್ತನೆ ತೋರಿರೋದು ಹಲವು ಪೋಷಕರಲ್ಲಿ ಆತಂಕವನ್ನುಂಟು ಮಾಡಿದೆ.
ಘಟನೆ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯನ್ನು ಸೀಜ್ ಮಾಡಿದ್ದಾರೆ. ಕುತ್ಬುಲ್ಲಾಪುರ ಉಸ್ತುವಾರಿ ಎಂಇಒ ಪೂರ್ಣಿಮಾ, ಶಾಲೆಯನ್ನು ಸೀಜ್ ಮಾಡಿರೋದಾಗಿ ತಿಳಿಸಿದ್ದಾರೆ. ಮೆಡ್ಚಲ್ ಡಿಇಒ ವಿಜಯಕುಮಾರಿ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದು, ಘಟನೆ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗ ಕೂಡ ಕ್ರಮಕ್ಕೆ ಮುಂದಾಗಿದೆ. 70 ಮಕ್ಕಳು 10ನೇ ತರಗತಿಯಲ್ಲಿ ಓದುತ್ತಿದ್ದು, ಆ ಮಕ್ಕಳನ್ನು ಮತ್ತೊಂದು ಶಾಲೆಗೆ ಕಳುಹಿಸಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ, ಮಕ್ಕಳ ಪೋಷಕರೊಂದಿಗೆ ಚರ್ಚೆ ಮಾಡಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಂಇಒ ತಿಳಿಸಿದ್ದಾರೆ.